ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ನಾನು ಏನು ಮಾತಾಡಿಕೊಂಡಿದ್ದೇವೆ ಎನ್ನುವುದು ನಮಗೆ ಮಾತ್ರ ಗೊತ್ತಿದೆ. ನಾವು ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆಯವರಿಗೆ ಗೊಂದಲ ಇರಬಹುದು. ಆದರೆ ನನಗೆ ಯಾವುದೇ ಗೊಂದಲ ಇಲ್ಲ. ನಾವು, ನಮ್ಮ ವರಿಷ್ಠರು ಮಾತಾಡಿಕೊಂಡಿದ್ದೇವೆ. ಬೇರೆಯವರು ಹೇಳಿಕೆ ಕೊಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.
ನನ್ನ ಪರ, ವಿರುದ್ಧ ಶಾಸಕರು, ಸಚಿವರು ಹೇಳಿಕ ನೀಡಿದರೆ ಪಕ್ಷಕ್ಕೆ ಧಕ್ಕೆ ಆಗುತ್ತದೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ನಾವು ಅದನ್ನು ಪಾಲಿಸಿಕೊಂಡು ಹೋಗಬೇಕು ಎಂದರು.
ಪಕ್ಷದ ವರಿಷ್ಠರು ಅಸ್ಸಾಂ ಚುನಾವಣೆ ಸಂಬಂಧ ಸಭೆ ಕರೆದಿದ್ದಾರೆ. ಆ ಸಭೆಗೆ ನನಗೂ ಆಹ್ವಾನ ಇದೆ. ಚುನಾವಣೆ ನಡೆಯಲಿರುವ ಕೇರಳಕ್ಕೆ ಹೋಗಿದ್ದೆ ದೆಹಲಿ ಸಭೆ ಮುಗಿಸಿಕೊಂಡು ಅಸ್ಸಾಂಗೆ ಹೋಗುತ್ತೇನೆ ಎಂದರು.
ಸಿಎಂ ಅವರಿಗೆ ತಿಳಿಸಿಯೇ ದೆಹಲಿಗೆ ಹೋಗುತ್ತಿದ್ದೇನೆ. ಬಜೆಟ್ ತಯಾರಿ ಸಭೆಯನ್ನು ಅವರು ನಡೆಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೆಹಲಿಯಿಂದ ಶುಭ ಸುದ್ದಿ ತರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ದಿನವೂ ನನಗೆ ಶುಭ ದಿನವೇ. ಯಾವುದೂ ಸುಲಭವಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದರ ಅನೇಕ ಕಷ್ಟಗಳು, ತೊಡಕುಗಳು ಇದ್ದೇ ಇರುತ್ತವೆ. ಟೀಕೆಗಳು ಬರುತ್ತಲೇ ಇರುತ್ತವೆ. ಆದರೂ ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗಬೇಕು ಎಂದರು.