ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳ ರಂಗು ತಾರಕ್ಕೇರಿದೆ. ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಅಂತಿಮ ಘಟ್ಟಕ್ಕೆ ತಲುಪಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ತನ್ನ ಸಂಪೂರ್ಣ ಶಕ್ತಿ ಪ್ರದರ್ಶಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ನಿನ್ನೆ ಅಕ್ತರ್ ರಾಜಾ ಸರ್ಕಲ್ನಲ್ಲಿ ನಡೆದ ಭಾರೀ ಸಮಾವೇಶದಲ್ಲಿ ಮಳೆಯ ನಡುವೆಯೂ ಜನಸ್ತೋಮ ಕಮ್ಮಿಯಾಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಸಿಎಂ ಮತ್ತು ಡಿಸಿಎಂ ಅಬ್ಬರದ ಭಾಷಣ ಮಾಡಿದರು. ಈ ವೇಳೆ ಸಮರ್ಥ್ ಶಾಮನೂರು ಡಿಸಿಎಂಗೆ ಕೊಡೆ ಹಿಡಿದ ದೃಶ್ಯ ವಿಶೇಷ ಗಮನ ಸೆಳೆದಿತು. ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅಲ್ಪಸಂಖ್ಯಾತರ ವಿರೋಧಿ ಪಕ್ಷ ಎಂದು ಆರೋಪಿಸಿದರು. ಅಸಮಾಧಾನಗೊಂಡಿದ್ದ ಮುಸ್ಲಿಂ ಮುಖಂಡರನ್ನು ಖುದ್ದಾಗಿ ಭೇಟಿ ಮಾಡಿ ಮನವೊಲಿಸುವ ಕಾರ್ಯವೂ ನಡೆದಿದೆ. ಸಂಸದೆ ಪ್ರಭಾ ಮಲ್ಲಿಕಾರ್ಜುನ್ ‘ನಿಮ್ಮ ಮನೆಯ ಮಗ’ ಎಂದು ಭಾವುಕವಾಗಿ ಮತಯಾಚಿಸಿದರು.
ಇನ್ನೊಂದೆಡೆ, ಬಾಗಲಕೋಟೆಯಲ್ಲಿ ರಾಜಕೀಯ ಚಿತ್ರಣವೇ ಬದಲಾಗಿದೆ.ಬಿಜೆಪಿಯಿಂದ ಉಚ್ಚಾಟಿತರಾಗಿದ್ದರೂ, ಫೈರ್ಬ್ರ್ಯಾಂಡ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಯತ್ನಾಳ್ ಪ್ರಚಾರ ನಡೆಸುತ್ತಿರುವುದು, ಪಕ್ಷದ ಒಳರಾಜಕೀಯದ ಹೊಸ ಸಂದೇಶವನ್ನೇ ನೀಡುತ್ತಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ‘ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವು ಖಚಿತ, ಯತ್ನಾಳ್ ಪ್ರಚಾರದಿಂದ ಅಂತರ ಹೆಚ್ಚಾದರೆ ಸಂತೋಷ’ ಎಂದಿದ್ದಾರೆ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಯತ್ನಾಳ್ ನಡೆ ಬಿಜೆಪಿಯತ್ತ ಮರಳುವ ಸಂಕೇತವೇ ಅಥವಾ ಸ್ಥಳೀಯ ರಾಜಕೀಯ ಹೊಂದಾಣಿಕೆಯ ಭಾಗವೇ ಎಂಬುದು ಫಲಿತಾಂಶದ ಬಳಿಕ ಸ್ಪಷ್ಟವಾಗಲಿದೆ. ಉಪಚುನಾವಣೆಯ ಈ ಕಾದಾಟ ರಾಜ್ಯ ರಾಜಕೀಯದ ದಿಕ್ಕನ್ನು ತೀರ್ಮಾನಿಸುವ ಸಾಧ್ಯತೆಯಿದೆ.