ಬೆಂಗಳೂರು:ದಾಬಸಪೇಟೆ-ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ ಮಟ್ಟದ ತನ್ನ 'ಬಿಝ್ಇಂಟೆಲ್ ಹಬ್ ಸ್ಥಾಪಿಸಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮತ್ತು ಟೊಯೋಟಾ ಕಂಪನಿಯು ಪರವಾಗಿ ಅದರ ಸಿಓಓ ಮತ್ತು ವಿಶೇಷ ಯೋಜನೆಯ ನಿರ್ದೇಶಕ ಸುದೀಪ್ ದಳವಿ ಅವರು ಈ ಕುರಿತ ಒಪ್ಪಂದಕ್ಕೆ ಅಂಕಿತ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು ಹೂಡಿಕೆಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ ಈ ರೀತಿಯ ಘಟಕ ಸ್ಥಾಪನೆ ಆಗುತ್ತಿರುವುದು ವಿಶ್ವದಲ್ಲೇ ಮೊದಲು ಎನ್ನುವ ವಿಷಯ ಕೇಳಿ ಸಂತಸವಾಯಿತು ಎಂದರು.
ಸಚಿವ ಪಾಟೀಲ ಮಾತನಾಡಿ, ಇದು ಕ್ವಿನ್ ಸಿಟಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಹೂಡಿಕೆಯಾಗಿದೆ. ಕಂಪನಿಯು ಐದು ವರ್ಷಗಳಲ್ಲಿ 1,200 ಕೋಟಿ ರೂ.ಗಳನ್ನು ಆರಂಭಿಕ ಬಂಡವಾಳವಾಗಿ ಹೂಡಲಿದ್ದು, ಇದರಿಂದ 200 ಉದ್ಯೋಗ ಸೃಷ್ಟಿಯಾಗಲಿವೆ. ಇದಕ್ಕಾಗಿ ಅಲ್ಲಿ ಟೊಯೋಟಾ ಕಂಪನಿಗೆ 300 ಎಕರೆ ಭೂಮಿ ಒದಗಿಸಲಾಗುವುದು. ಇಲ್ಲಿ ವಾಹನಗಳ ತಯಾರಿಕೆ, ಪರೀಕ್ಷೆಗಳು, ಆಧುನಿಕ ವಾಹನ ತಯಾರಿಕಾ ಸ್ಥಾವರ ಆರಂಭ ಎಲ್ಲವೂ ನಡೆಯಲಿವೆ. ಇದು ರಾಜ್ಯದ ಯುವಜನರಿಗೆ ವರದಾನವಾಗಲಿದೆ ಎಂದಿದ್ದಾರೆ.
ಕ್ವಿನ್ ಸಿಟಿಯಲ್ಲಿ ನಾವೀನ್ಯತೆ, ಆರೋಗ್ಯ ಸೇವೆಗಳು ಮತ್ತು ಐಟಿ ತಂತ್ರಜ್ಞಾನಕ್ಕೆ ಅಗ್ರ ಆದ್ಯತೆ ಕೊಡಲಾಗುವುದು. ಇಲ್ಲಿ ಹೂಡಿಕೆ ಮಾಡಲು ಜಾಗತಿಕ ಮಟ್ಟದ ಏಳೆಂಟು ವಿಶ್ವವಿದ್ಯಾಲಯಗಳು, ಆರೋಗ್ಯ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಈಗಾಗಲೇ ಮುಂದೆ ಬಂದಿವೆ. ಅವುಗಳೊಂದಿಗೂ ಆದಷ್ಟು ತ್ವರಿತವಾಗಿ ಒಡಂಬಡಿಕೆಗೆ ಅಂತಿಮರೂಪ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಅತ್ಯಾಧುನಿಕ ನಗರವು ಒಟ್ಟು 5,800 ಎಕರೆಯಲ್ಲಿ ಹಂತಹಂತವಾಗಿ ಅಸ್ತಿತ್ವಕ್ಕೆ ಬರಲಿದೆ. ಈಗಾಗಲೇ ಮೊದಲ ಹಂತದ ಅಭಿವೃದ್ಧಿ ಪ್ರಗತಿಯಲ್ಲಿದೆ. ಈ ಯೋಜನೆಗೆ ಒಟ್ಟು 48 ಸಾವಿರ ಕೋಟಿ ರೂಪಾಯಿ ಹೂಡಿಕೆ ಆಗಲಿದ್ದು, ಒಟ್ಟಾರೆಯಾಗಿ 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಪಾಟೀಲ ನುಡಿದಿದ್ದಾರೆ.