ಕೇಂದ್ರ ಬಜೆಟ್ಹಿ ಇನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಜೆಟ್ ನಮ್ಮ ರಾಜ್ಯಕ್ಕೂ ರೈತರಿಗೂ ಯಾವುದೇ ರೀತಿಯ ಅನುಕೂಲ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರೈತರ ಬೆಳೆಗಳಿಗೆ, ವಿಶೇಷವಾಗಿ ರೇಷ್ಮೆ ಬೆಳೆ ಅಭಿವೃದ್ಧಿಗೆ ಕೇಂದ್ರ ಸರಕಾರ ಉತ್ತೇಜನ ನೀಡಬೇಕು.ಸಕ್ಕರೆ ಬೆಲೆ ಹೆಚ್ಚಳ ಮಾಡದಿರುವುದರಿಂದ ರೈತರಿಗೆ ಭಾರೀ ನಷ್ಟವಾಗುತ್ತಿದೆ ಎಂದರು.
8-9 ವರ್ಷಗಳಿಂದ ಸಕ್ಕರೆ ಬೆಲೆ ಏರಿಕೆ ಮಾಡಿಲ್ಲ. ಇದರ ಪರಿಣಾಮವಾಗಿ ಕಬ್ಬು ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಕೋಪರೇಟಿವ್ ಸಕ್ಕರೆ ಕಾರ್ಖಾನೆಗಳು ಮುಚ್ಚುವ ಹಂತಕ್ಕೆ ಬರುತ್ತಿವೆ. ನಮ್ಮ ಭಾಗದ ಐದು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಬ್ಬು ಬೆಳೆಯಲಾಗುತ್ತದೆ. ರೈತರಿಗೆ ಕೇಂದ್ರ ಏನು ಸಹಾಯ ಮಾಡಿದೆ? ಎಂದು ಪ್ರಶ್ನಿಸಿದರು.
ಕೃಷಿ ವಲಯದಲ್ಲಿ ಕೃತಕ ಬುದ್ದಿಮತ್ತೆ (ಎಐ) ಬಳಕೆಗೆ ಕೇಂದ್ರ ಒತ್ತು ನೀಡಿರುವುದನ್ನು ಪ್ರಶ್ನಿಸಿದ ಡಿಕೆಶಿ, ಮನರೇಗಾ ಯೋಜನೆಯಲ್ಲಿ ಕೂಡಾ ಎಐ ಬಳಸಿ ಕೂಲಿ ನಿರ್ಧಾರ ಮಾಡುತ್ತೇವೆ ಎನ್ನುವುದು ಅರ್ಥವಿಲ್ಲದ ಮಾತು. ವ್ಯವಸಾಯದ ಕಾಲದಲ್ಲಿ ಸರಿಯಾಗಿ ಕೂಲಿ ಕೊಡದವರು ಈಗ ಎಐ ಮಾತಾಡುತ್ತಿದ್ದಾರೆ. ಎಐಯಿಂದ ರೈತರಿಗೆ ನೈಜ ಪ್ರಯೋಜನ ಆಗಲ್ಲ ಎಂದು ಕಟುವಾಗಿ ಟೀಕಿಸಿದರು.ಬೆಂಗಳೂರು-ಹೈಸ್ಪೀಡ್ ರೈಲು ಘೋಷಣೆ ಕುರಿತು ವ್ಯಂಗ್ಯವಾಡಿದ ಡಿಕೆಶಿ, ಯಾವ ಹೈಸ್ಪೀಡ್ ರೈಲು? ಯಾವ ಸ್ಪೀಡ್ ರೈಲೂ ಬರಲ್ಲ ಎಂದು ವ್ಯಂಗ್ಯವಾಡಿದರು. ಇನ್ನು ಇದೇ ವೇಳೆ ಕೇಂದ್ರ-ರಾಜ್ಯ ಹಣಕಾಸು ಹಂಚಿಕೆ ಕುರಿತು ಮಾತನಾಡಿ, 50:50 ಒಪ್ಪಂದ ಆಗಲ್ಲ. ಬೇಕಾದ್ರೆ 90:10 ಮಾಡಲಿ. ಆಗ ರಾಜ್ಯ ಶೇ. 10 ಕೊಡುತ್ತೇವೆ. ಬೇರೆ ರಾಜ್ಯಗಳಿಗೆ ಶೇ. 90 ಅನುದಾನ ಕೊಟ್ಟಿದ್ದಾರೆ. ನಮ್ಮ ರಾಜ್ಯಕ್ಕೂ ಅದೇ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಕುರಿತು ಹೆಚ್ಚಿನ ನಿರೀಕ್ಷೆ ಇತ್ತು. ಪ್ರಧಾನಮಂತ್ರಿಗಳೇ ಬೆಂಗಳೂರನ್ನು ಗ್ಲೋಬಲ್ ಸಿಟಿ ಅಂತ ಹೇಳಿದ್ದಾರೆ. ಆ ಗ್ಲೋಬಲ್ ಸಿಟಿಗೆ ಈ ಬಜೆಟ್ನಲ್ಲಿ ಏನು ಒತ್ತು ಕೊಟ್ಟಿದ್ದಾರೆ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮತ್ತೆ ಮಾತನಾಡುತ್ತೇನೆ ಎಂದು ಕಿಡಿಕಾರಿದರು.