ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಈಗ ಕರ್ನಾಟಕದ ಹೋಟೆಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬಿದ್ದಿದೆ. ಎಲ್ಪಿಜಿ ಕಮರ್ಷಿಯಲ್ ಸಿಲಿಂಡರ್ ಕೊರತೆಯಿಂದಾಗಿ ರಾಜ್ಯದ ಅನೇಕ ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹೋಟೆಲ್ಗಳಿಗೆ ಅಗತ್ಯವಿರುವ ಗ್ಯಾಸ್ ಸಿಲಿಂಡರ್ ಸಿಗದೆ ವ್ಯಾಪಾರ ನಡೆಸುವುದು ಕಷ್ಟವಾಗುತ್ತಿದೆ. ಇದರ ಪರಿಣಾಮವಾಗಿ 20ರಿಂದ 25 ಹೋಟೆಲ್ಗಳ ಮಾಲೀಕರು ತಮ್ಮ ಹೋಟೆಲ್ಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ.ಸಣ್ಣ ಮತ್ತು ಮಧ್ಯಮ ಹೋಟೆಲ್ಗಳು ಹೆಚ್ಚು ಹೊಡೆತ ಅನುಭವಿಸುತ್ತಿದ್ದು, ಕೆಲವರು ಮೆನು ಕಡಿತ ಮಾಡಿ, ಇನ್ನೂ ಕೆಲವರು ತಾತ್ಕಾಲಿಕವಾಗಿ ಹೋಟೆಲ್ಗಳನ್ನು ಮುಚ್ಚಿದ್ದಾರೆ. ದೋಸೆ ಕೌಂಟರ್ಗಳನ್ನೂ ಬಂದ್ ಮಾಡಿರುವ ಕಾರಣ ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಹೋಟೆಲ್ ಉದ್ಯಮ ಕುಸಿತದ ನಡುವೆ ಉದ್ಯೋಗದ ಕೊರತೆ ಉಂಟಾಗಿ, ಹಲವಾರು ಸಿಬ್ಬಂದಿ ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ಇದೇ ವೇಳೆ ಕಲಬುರಗಿಯಲ್ಲೂ ಪರಿಸ್ಥಿತಿ ಗಂಭೀರವಾಗಿದ್ದು, ಗ್ಯಾಸ್ ಸಿಲಿಂಡರ್ಗಳ ಅಭಾವದಿಂದ ಹೋಟೆಲ್ ನಡೆಸುವುದು ಕಷ್ಟಕರವಾಗಿದೆ. ಗ್ಯಾಸ್ ಏಜೆನ್ಸಿಗಳು ಕಾಳಸಂತೆ ಮೂಲಕ ದುಬಾರಿ ದರದಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಹೋಟೆಲ್ಗಳಿಗೆ ಮೀಸಲಾದ ಸಿಲಿಂಡರ್ಗಳನ್ನೇ ಬೇರೆ ಕಡೆ ಮಾರಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಹೋಟೆಲ್, ಬೇಕರಿ ಮತ್ತು ವಸತಿಗೃಹ ಮಾಲೀಕರ ಸಂಘ ಆಗ್ರಹಿಸಿದೆ.