ಹಾಸನ: ರಾಜ್ಯ ಕಾಂಗ್ರೆಸ್ ಸರಕಾರವು ಸಾವಿರ ದಿನಗಳ ಸಂಭ್ರಮಾಚರಣೆಗೆ ಸಿದ್ಧವಾಗಿದೆ. ಸಾವಿರ ದಿನಗಳ ಕಾಂಗ್ರೆಸ್ ಸಂಭ್ರಮಾಚರಣೆ ಸಾವಿರಾರು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ದರೋಡೆ ಹೆಚ್ಚಾಗಿದೆ. ಅತ್ಯಾಚಾರಳು, ಹತ್ಯೆಗಳು ಹೆಚ್ಚುತ್ತಿವೆ. ಈ ರೀತಿ ಪಟ್ಟಿ ಮಾಡುತ್ತಾ ಹೋದರೆ ಸಾವಿರ ಸಮಸ್ಸಯೆಗಳನ್ನು ಉಲ್ಲೇಖಿಸಬಹುದು. ಕೇವಲ 5 ಗ್ಯಾರಂಟಿ ಕೊಡುತ್ತಿರುವ ನೆಪದಲ್ಲಿ ಸರಕಾರ ಲೂಟಿಗಿಳಿದಿದೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ, ವರ್ಗಗಳಿಗೆ 42 ಸಾವಿರ ಕೋಟಿ ರೂ. ಹಣ ಇಟ್ಟಿದ್ದೇನೆ ಎಂದಿದ್ದರು. ಆದರೆ, ಅವರಿಗೆ ನಯಾಪೈಸೆ ಸಿಕ್ಕಿಲ್ಲ. ಗ್ಯಾರಂಟಿ ನನಗೂ ಫ್ರೀ, ನಿನಗೂ ಫ್ರೀ ಎಂದಿದ್ದ ಮುಖ್ಯಮಂತ್ರಿಗಳು ದಲಿತ ಸಮುದಾಯಗಳಿಗೆ ಗ್ಯಾರಂಟಿ ಹಣ ಕೊಡಲೇ ಎಂದು ಟೀಕಿಸಿದರು.
ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಏಕೆ?
ಅಲ್ಪಸಂಖ್ಯಾತರಿಗೆ ಸುಮಾರು 700 ಕೋಟಿಯ ಒನ್ ಟೈಮ್ ಸೆಟಲ್ಮೆಂಟ್ ಘೋಷಿಸಿದ್ದಾರೆ. ಬಡ್ಡಿರಹಿತವಾಗಿ ಸಾಲವನ್ನು ವಾಪಸ್ ಪಡೆಯುತ್ತಿರುವ ಈ ನಿರ್ಣಯ ಸ್ವಾಗತಾರ್ಹ. ಇದೇ ಯೋಜನೆ ದಲಿತರಿಗೆ ಏಕಿಲ್ಲ? ಹಿಂದುಳಿದವರಿಗೆ, ರೈತರಿಗೆ ಯಾಕೆ ಇಲ್ಲ? ಮಹಿಳೆಯರು, ಸ್ವಸಹಾಯ ಸಂಘಗಳು ಸಮಾಜವನ್ನು ಕಟ್ಟುವ ಕೆಲಸ ಮಾಡಲು ಹೊರಟ ಈ ಸಂದರ್ಭದಲ್ಲಿ ಅವರೂ ಸಾಲ ಪಡೆದಿದ್ದಾರೆ. ಆ ಬಡ್ಡಿಯನ್ನೂ ಸರಕಾರ ಮನ್ನಾ ಮಾಡಬೇಕಲ್ಲವೇ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಏಕೆ ಎಂದು ಪ್ರಶ್ನಿಸಿದರು.