ಶಿವಮೊಗ್ಗ: ಇತ್ತೀಚೆಗೆ ನಗರದ ಹೊರವಲಯದ ಉರಗಡೂರಿನಲ್ಲಿ ಸಂಕೇತ್ ಎಂಬ ಅಪ್ರಾಪ್ತ ಬಾಲಕನ ಹತ್ಯೆ ನಡೆದಿತ್ತು. ಈತನ ಹತ್ಯೆ ಮಾಡಿದ ಏಳು ಹುಡುಗರೂ ಕಾನೂನ ಸಂಘರ್ಷಕ್ಕೊಳಗಾದ ಬಾಲಕರು. ಬಾಲಕನ ಸಾವಿಗೆ ಕ್ರಿಕೆಟ್ ಕಾರಣ ಎಂದು ಕೇಳಿ ಬಂದಿತ್ತು. ತನಿಖೆ ಮುಂದುವರೆದಂತೆ ಸಂಕೇತ್ ಸಾವಿಗೆ ಗಾಂಜಾ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಗಾಂಜಾ ಅಮಲು ಕಾರಣ?:
ಸಂಕೇತ್ ಓದುತ್ತಿದ್ದ ಸರ್ಕಾರಿ ಶಾಲೆಯ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದಲ್ಲಿ ನಾಲ್ವರು ಹಳೆಯ ವಿದ್ಯಾರ್ಥಿಗಳು ಕುಳಿತು ಗಾಂಜಾ ಸೇದುತ್ತಿದ್ದರು. ಆ ಗುಂಪಿನಲ್ಲಿದ್ದ ಹುಡುಗನೊಬ್ಬ ಮತ್ತಿನಲ್ಲಿ ಶಾಲೆಯತ್ತ ಕಲ್ಲು ಎಸೆದಿದ್ದಾನೆ. ಅದು ಕಿಟಕಿ ಬಳಿ ಕುಳಿತಿದ್ದ ಸಂಕೇತ್ಗೆ ತಗುಲಿತ್ತು. ಇದು ಶಿಕ್ಷಕರ ಗಮನಕ್ಕೆ ಬರುತ್ತಿದ್ದಂತೆ, ಪೊಲೀಸರನ್ನು ಕರೆಯಿಸಿ ಕಲ್ಲು ಹೊಡೆದವರಿಗೆ ಎಚ್ಚರಿಕೆ ನೀಡಲಾಗಿತ್ತು. ಆ ಬಾಲಕರ ಪೋಷಕರ ಗಮನಕ್ಕೂ ಈ ವಿಷಯವನ್ನು ತರಲಾಗಿತ್ತು. ಇದನ್ನೇ ಮನಸ್ಸಿನ ಲ್ಲಿಟ್ಟುಕೊಂಡ ಗುಂಪು ಸಂಕೇತ್ನ ವಿರುದ್ಧ ಸೇಡು ತೀರಿಸಿಕೊಂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪೊಲೀಸರಿಗೆ ತಿಳಿಸಿದ್ದರು ಎಂದು ಶಾಲೆಯ ಶಿಕ್ಷಕಿಯ ಮನೆಗೂ ಆ ಹುಡುಗರು ಕಲ್ಲು ಹೊಡೆದಿದ್ದರು. ಆದರೆ ಆ ಶಿಕ್ಷಕಿ ಹೆದರಿಕೊಂಡು ಅವರು ಮನೆ ಬದಲಾಯಿಸಿದ್ದರು.
ಇವರು ಗಾಂಜಾ ಸೇವಿಸಿದ್ದರೇ ಎಂದು ಖಚಿತಪಡಿಸಿಕೊಳ್ಳಲು ರಕ್ತ ಮತ್ತು ಮೂತ್ರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.