ಕೋಲಾರ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು ನಗರ ನಕ್ಸಲರ ಜೊತೆ ಸೇರಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ದೇಶದಲ್ಲಿ ನಕ್ಸಲಿಸಂ ಪ್ರಾರಂಭವಾಗಿದ್ದೇ ಕಮ್ಯುನಿಸ್ಟರಿಂದ. ಅದೇ ಕಾರಣಕ್ಕೆ ಅವರನ್ನು ಸಂಪೂರ್ಣವಾಗಿ ಜನ ತಿರಸ್ಕರಿಸಿದರು. ಬಳಿಕ ಕಾಂಗ್ರೆಸ್ಸನ್ನೂ ತಿರಸ್ಕಾರ ಮಾಡಿದರು ಎಂದರು.
ಒಕ್ಕೂಟ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಯಿಂದ ದೇಶದ ಪ್ರಧಾನಿವರೆಗೆ ಒಬ್ಬರನ್ನೊಬ್ಬರು ಗೌರವಿಸುವ ವ್ಯವಸ್ಥೆ ಇದೆ. ಆದರೂ ಪ್ರಧಾನಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಾಂವಿಧಾನಿಕವಾಗಿ ನಿಂದಿಸುತ್ತಿದ್ದಾರೆ. ಮೋದಿ ಅವರ ಕಾಲಿನ ದೂಳಿಗೂ ಸಮನಾಗದ ಪ್ರಿಯಾಂಕ್ ಖರ್ಗೆಯೂ ಹೇಡಿ ಎನ್ನುತ್ತಾರೆ. ಕೋಲಾರ ಪವಿತ್ರ ಭೂಮಿ. ಈ ಭೂಮಿಯಲ್ಲಿ ಜನ್ಮ ತಾಳಿದ ಎಂಎಲ್ಸಿ ನಜೀರ್ ಅಹ್ಮದ್ ಕೂಡ ಪ್ರಧಾನಿಯವರ ಕುರಿತು ಇದೇ ರೀತಿಯ ಪದ ಬಳಸಿದ್ದಾರೆ ಎಂದು ದೂರಿದರು.