ಚೆನ್ನೈ: ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲಿರುವ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿರುವ ಕಾಂಗ್ರೆಸ್ ನಿರ್ದಾರಕ್ಕೆ ಡಿಎಂಕೆ ಅಸಮಾಧಾನ ವ್ಯಕ್ತಪಡಿಸಿದೆ.
ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ, ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಪಕ್ಷಾಂತರ ಮಾಡಿ ಟಿವಿಕೆಯನ್ನು ಬೆಂಬಲಿಸಲು ನಿರ್ಧರಿಸಿದೆ. ಇದಕ್ಕೆ ಅವರು ಕೊಡುವ ಕಾರಣ ಸಮರ್ಪಕವಾಗಿಲ್ಲ. ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ದೂರವಿಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್ನ ಈ ನಿರ್ಧಾರವು ದೇಶದಾದ್ಯಂತ ಇತರ ಮೈತ್ರಿ ಪಾಲುದಾರರಲ್ಲಿ ಗೊಂದಲ ಮೂಡಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಹಸ್ತಲಾಘವ ಮಾಡಿದ ಕೈಯೇ ನಿಮಗೆ ಇರಿದಾಗ ನಂಬಿಕೆಯು ಚೂರು ಚೂರಾಗುತ್ತದೆ. ಫಲಿತಾಂಶ ಬಂದ 24 ಗಂಟೆಯೊಳಗೆ ಕಾಂಗ್ರೆಸ್ ನಂಬಿಕೆದ್ರೋಹ ಎಸಗಿದೆ. ಜನಾದೇಶದ ವಿರುದ್ಧ ಹೋಗುವುದಾದರೆ, ಇದು ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ ಮತ್ತ ಇತರರ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರಬಹುದು?' ಎಂದು ಪ್ರಶ್ನಿಸಿದ್ದಾರೆ.
ಟಿವಿಕೆಗೆ ಬಹುಮತದ ಗಡಿ ದಾಟಲು 10 ಸ್ಥಾನಗಳ ಅಗತ್ಯವಿದೆ. 47 ಸ್ಥಾನಗಳನ್ನು ಹೊಂದಿರುವ ಎಐಎಡಿಎಂಕೆ ಬೇಷರತ್ ಬೆಂಬಲ ನೀಡಲು ಸಿದ್ಧವಾಗಿದೆ. ನೀವು ವಿಜಯ್ ಅವರ ಸ್ಥಾನದಲ್ಲಿದ್ದರೆ ಯಾರ ಮಾತನ್ನು ಕೇಳುತ್ತೀರಿ? 5 ಸ್ಥಾನ ಹೊಂದಿರುವವರನ್ನೋ ಅಥವಾ 47 ಸ್ಥಾನ ಹೊಂದಿರುವವರನ್ನೋ? ಎಂದು ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದ್ದಾರೆ. ಇಂಡಿಯಾ ಒಕ್ಕೂಟಕ್ಕೆ ಡಿಎಂಕೆ ಇನ್ನೂ ಬೆಂಬಲ ನೀಡುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೊಂದು ದೊಡ್ಡ ಪ್ರಶ್ನೆ ಮತ್ತು ಪಕ್ಷದ ನಾಯಕರು ಉತ್ತರ ನೀಡಲಿದ್ದಾರೆ ಎಂದರು.
108 ಸ್ಥಾನಗಳನ್ನು ಗೆದ್ದು ಟಿವಿಕೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2, ಸಿಪಿಐ(ಎಂ) 2 ಹಾಗೂ ವಿಸಿಕೆ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ಪಕ್ಷಗಳು ತಲಾ 1 ಸ್ಥಾನ ಪಡೆದುಕೊಂಡಿವೆ. ಬಹುಮತಕ್ಕೆ ಟಿವಿಕೆಗೆ 10 ಸ್ಥಾನಗಳ ಕೊರತೆ ಕಂಡು ಬಂದಿದ್ದು, ಕಾಂಗ್ರೆಸ್ ಸೇರಿ ಇತರ ಪಕ್ಷಗಳ ಬೆಂಬಲವನ್ನು ಕೋರಿತ್ತು. ಟಿವಿಕೆ ಮನವಿಗೆ ಕಾಂಗ್ರೆಸ್ ಸ್ಪಂದಿಸಿದ್ದು, ಮೈತ್ರಿ ಒಪ್ಪಿಗೆ ಸೂಚಿಸಿರುವುದಾಗಿ ಇಂದು ಬೆಳಗ್ಗೆ ಘೋಷಿಸಿದೆ.