ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ ಕರಾವಳಿ ವಿರೋಧಿಯಾಗಿದೆ ಎಂದು ಬಿಜೆಪಿ ಶಾಸಕ ಸುನೀಲ್ಕುಮಾರ್ ಟೀಕಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರಾವಳಿಯ ಜಿಲ್ಲೆಗಳಿಗೆ ಈ ಸರಕಾರ ದ್ರೋಹ ಎಸಗಿದೆ. ಕರಾವಳಿ ಭಾಗದ ಸಮಸ್ಯೆಗಳನ್ನು ಕುರಿತು ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದೆವು. ಕರಾವಳಿಯ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ಯಾಕೇಜ್ ನೀಡುವಂತೆ ಕೇಳಿಕೊಂಡಿದ್ದೆವು. ಆದರೆ, ಕರಾವಳಿಯ ಪ್ರವಾಸೋದ್ಯಮಕ್ಕೆ ಅಗತ್ಯವಾದ ಯೋಜನೆಯನ್ನು ಬಜೆಟ್ನಲ್ಲಿ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.
ಉಡುಪಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮತ್ತು ಬ್ರಹ್ಮಾವರದಲ್ಲಿ ಕೃಷಿ ಕಾಲೇಜಿನ ಬೇಡಿಕೆ ಇಡಲಾಗಿತ್ತು. ಬ್ರಹ್ಮಾವರದ ಕೃಷಿ ಡಿಪ್ಲೊಮಾ ಕಾಲೇಜನ್ನು ಮಾರ್ಪಾಡು ಮಾಡಲು ಕೇಳಿದ್ದೆವು. ಅದು ಕೂಡ ಈಡೇರಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಿಗೆ ಪಶ್ಚಿಮ ವಾಹಿನಿಯ ಮೂಲಕ ವ್ಯಾಪಕವಾದ ಕಿಂಡಿ ಅಣೆಕಟ್ಟುಗಳನ್ನು ನಮ್ಮ ಸರಕಾರದ ಕಾಲದಲ್ಲಿ ಮಾಡಿದ್ದೆವು. ನೀರಾವರಿ- ಅಂತರಜಲ ವೃದ್ಧಿಗೆ ಪಶ್ಚಿಮ ವಾಹಿನಿ ಯೋಜನೆ ಮುಂದುವರೆಸಲು ಬೇಡಿಕೆ ಇಟ್ಟಿದ್ದು, ಅದನ್ನೂ ಕೈಬಿಟ್ಟು ಕರಾವಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.