ದೆಹಲಿ: ಬಾಲಿವುಡ್ ಸಂಗೀತ ಸಂಯೋಜಕ ಮತ್ತು ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ವಿರುದ್ಧ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅಟ್ರೋಸಿಟಿ (SC/ST ಕಾಯ್ದೆ) ಪ್ರಕರಣ ದಾಖಲಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರ ಗೆಳೆಯ ವಿಜ್ಞಾನ್ ಮಾನೆ ಎಂಬವರಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಪಲಾಶ್ ಮುಚ್ಚಲ್ ಅವರು ತಮ್ಮ ಮೇಲೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಸಾಂಗ್ಲಿ ನಿವಾಸಿಯಾದ ವಿಜ್ಞಾನ್ ಮಾನೆ ಪೊಲೀಸ್ ದೂರು ನೀಡಿದ್ದಾರೆ.
'ನಜರಿಯಾ' ಎಂಬ ಚಿತ್ರದ ಯೋಜನೆಗಾಗಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿಸಿಕೊಂಡು, ಅದನ್ನು ಮರಳಿ ನೀಡದೆ ವಂಚಿಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನವೆಂಬರ್ 22 ರಂದು ಸಾಂಗ್ಲಿ-ಅಷ್ಟಾ ರಸ್ತೆಯ ಟೋಲ್ ಪ್ಲಾಜಾದಲ್ಲಿ ಹಣದ ವಿಚಾರವಾಗಿ ನಡೆದ ಜಗಳದ ಸಂದರ್ಭದಲ್ಲಿ ಪಲಾಶ್ ಮುಚ್ಚಲ್ ಜಾತಿ ನಿಂದನೆ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಸಾಂಗ್ಲಿ ಸಿಟಿ ಪೊಲೀಸ್ ಠಾಣೆಯಲ್ಲಿ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(R)(S) ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 351(2), 352 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಈ ಹಿಂದೆ ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧನಾ ಅವರ ವಿವಾಹ ನಿಶ್ಚಯವಾಗಿ, ನಂತರ ಮುರಿದುಬಿದ್ದಿತ್ತು.