ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಹೇಡಿ ಎಂದು ಜರಿದಿದ್ದು, ಇದು ಭಾರತೀಯರಿಗೆ ಮಾಡಿದ ಅಪಮಾನ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು 146 ಕೋಟಿ ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. 2014ರಲ್ಲಿ ಮೋದಿ ಅವರನ್ನು ನರಹಂತಕ ಎಂದಿದ್ದರು. ಆಗ ನಿಮಗೆ ಚುನಾವಣೆಯಲ್ಲಿ ಜನರು ಛೀಮಾರಿ ಹಾಕಿದ್ದರು ಎಂದು ತಿಳಿಸಿದರು.
ಕೇವಲ ಕುರ್ಚಿಗಾಗಿ, ಸೋನಿಯಾ ಗಾಂಧಿ, ಅಪ್ರಬುದ್ಧ ರಾಜಕಾರಣಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಶಿರಬಾಗಿ ನಮಸ್ಕರಿಸುತ್ತೀರಲ್ಲವೇ? ಇದು ಅನುಭವಿ ರಾಜಕಾರಣಿಯಾದ ನಿಮಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅವರು ನಿಮಗೆ ಹೆದರಿ ಓಡಿ ಹೋಗಿಲ್ಲ. ಕಾಂಗ್ರೆಸ್ ಪಕ್ಷವು ಮಹಿಳಾ ಸದಸ್ಯರ ಮೂಲಕ ಪ್ರತಿಭಟನೆಗೆ ಮುಂದಾಗಿತ್ತು. ಲೋಕಸಭಾ ಸ್ಪೀಕರ್ ಅವರ ಸಲಹೆ ಮೇರೆಗೆ ಆ ಸಂದರ್ಭದಲ್ಲಿ ಪಾಲ್ಗೊಂಡಿಲ್ಲ. ಕುರ್ಚಿಯ ವಿಷಯ ಬಂದಾಗ ನೀವು ಈ ರೀತಿ ಮಾತನಾಡುತ್ತೀರಿ. ನೀವು ಅಧಿಕಾರಕ್ಕೆ ಬಂದು 3 ವರ್ಷಗಳಾಗಿವೆ. ನಿಮ್ಮ ಸಾಧನೆ ಏನು ಎಂದು ಹೇಳಲು ಆಗುತ್ತಿಲ್ಲ ಎಂದು ಟೀಕಿಸಿದರು.
ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಲೋಕಸಭೆ, ರಾಜ್ಯಸಭೆ, ಗೌರವಾನ್ವಿತ ರಾಷ್ಟ್ರಪತಿಗಳ ಅಂಕಿತ ಲಭಿಸಿದೆ. ನೀವು ರಾಜ್ಯಪಾಲರ ಬಾಯಿಯಿಂದ ಸುಳ್ಳು ಹೇಳಿಸುವ ಪ್ರಯತ್ನ ಮಾಡಿದ್ದೀರಿ. ನೀವು ಈಗ ಕೇವಲ 3 ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದೀರಿ ಎಂದು ರೇಣುಕಾಚಾರ್ಯ ತಿಳಿಸಿದರು.