ಚೆನ್ನೈ: ಮಗಳ ಮದುವೆಗಾಗಿ ಖರೀದಿಸಿದ್ದ ಮಹಿಳೆಯೊಬ್ಬರು ಕಳೆದುಕೊಂಡಿದ್ದ 160 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿಯನ್ನು ಪೌರ ಕಾರ್ಮಿಕರೊಬ್ಬರು ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಮಿಳುನಾಡಿನ ತಿರುವರೂರು ನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎನ್. ದೊರೈ ಎಂಬುವರು ಚಿನ್ನಾಭರಣಗಳನ್ನು ಮರಳಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮಗಳ ಮದುವೆಗೆ ಚೆನ್ನೈನ ರಾಧಾಕೃಷ್ಣನ್ ಅವರ ಕುಟುಂಬಕ್ಕೆ ಸೇರಿದ ಮಹಿಳೆಯೊಬ್ಬರು 160 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿ ಆಭರಣಗಳನ್ನು ಖರೀದಿಸಿದ್ದರು.
ಚೆನ್ನೈನಿಂದ ತಿರುವರೂರಿಗೆ ಬಂದಿದ್ದ ಈ ಮಹಿಳೆ ಮನೆಯಲ್ಲಿ ಈ ಆಬರಣಗಳ ಬ್ಯಾಗ್ ಇಟ್ಟಿದ್ದರು. ಆದರೆ ಈ ಬ್ಯಾಗ್ ಕಳವಾಗಿತ್ತು. ಈ ಚಿನ್ನ ಹಾಗೂ ಬೆಳ್ಳಿ ಆಭರಣಗಳಿದ್ದ ಬ್ಯಾಗ್ ದೊರೈ ಅವರಿಗೆ ಕಾಲುವೆಯೊಂದರ ಪಕ್ಕ ಸಿಕ್ಕಿದೆ. ದೊರೈ ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಬೆಲೆ ಬಾಳುವ ಆಭರಣಗಳನ್ನು ಮರಳಿಸಿದ್ದಾರೆ.
ಈ ಬ್ಯಾಗನ್ನು ಕಳ್ಳರು ಬಿಟ್ಟು ಹೋಗಿದ್ದಾರೆಯೇ ಅಥವಾ ಆಕಸ್ಮಿಕವಾಗಿ ಕಾಲುವೆ ಬಳಿ ಬಿದ್ದಿದೆಯೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಚಿನ್ನ ಕಳೆದುಕೊಂಡ ಮಹಿಳೆಯ ಕುಟುಂಬ ದೊರೈ ಅವರನ್ನು ಸನ್ಮಾನಿಸಿ ಕೃತಜ್ಞತೆ ತೋರಿಸಿದ್ದಾರೆ.