ತಿರುವನಂತಪುರ: ‘ದಿ ಕೇರಳ ಸ್ಟೋರಿ’ ಸಿನಿಮಾದ ಎರಡನೇ ಆವೃತ್ತಿ ಕೇರಳ ರಾಜ್ಯದ ಜಾತ್ಯಾತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮೂಲಭೂತ ತತ್ವಗಳಲ್ಲಿ ಒಂದಾಗಿರುವ ಧಾರ್ಮಿಕ ಸೌಹಾರ್ದವನ್ನು ಈ ಸಿನಿಮಾ ಕದಡುತ್ತದೆ ಎಂದು ಟೀಕಿಸಿದ್ದಾರೆ. ಧಾರ್ಮಿಕ ಸಾಮರಸ್ಯದ ಕೇರಳವನ್ನು ಭಯೋತ್ಪಾದನೆಯ ಕೇಂದ್ರ ಎಂದು ಚಿತ್ರೀಕರಿಸಿರುವ ಪ್ರಯತ್ನವನ್ನು ತಿರಸ್ಕರಿಸುವಂತೆ ಅವರು ಕರೆ ನೀಡಿದ್ದಾರೆ.
ಸಿನಿಮಾದ ಮೊದಲ ಭಾಗವನ್ನು ರಾಜ್ಯದ ವಿರುದ್ಧ ದ್ವೇಷ ಹರಡುವ ಹಾಗೂ ಜಾತ್ಯತೀತ ಸಂಪ್ರದಾಯವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಮಾಡಲಾಗಿತ್ತು. ಸಮಾಜದಲ್ಲಿ ಭಿನ್ನತೆ ಹಾಗೂ ದ್ವೇಷ ಹರಡಲು ಸೃಷ್ಟಿ ಮಾಡಿದ ವಿಷಪೂರಿತ ರಚನೆಗಳನ್ನು ಪ್ರದರ್ಶನ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ‘ಬೀಫ್’ ನಂತಹ ಸಿನಿಮಾಗಳಿಗೆ ಚಲನಚಿತ್ರೋತ್ಸವದಲ್ಲಿ ಅವಕಾಶ ನಿರಾಕರಿಸಲಾಗುತ್ತದೆ ಎಂದು ಟೀಕಿಸಿದ್ದಾರೆ.
ಯಾವುದೇ ಕೋಮು ಗಲಭೆಗಳಿಲ್ಲದ ಮತ್ತು ಸಮುದಾಯಗಳ ನಡುವೆ ಪರಸ್ಪರ ಗೌರವದ ಸಂಪ್ರದಾಯವಿರುವ ಕೇರಳವನ್ನು ಸಂಘಪರಿವಾರದಂತಹ ಶಕ್ತಿಗಳು ದ್ವೇಷದಿಂದ ನೋಡುತ್ತವೆ. ರಾಜ್ಯದ ಶಾಂತಿ ಮತ್ತು ನೆಮ್ಮದಿಯನ್ನು ನಾಶಪಡಿಸಲು ಪ್ರಯತ್ನಿಸುತ್ತಿವೆ ಎಂದು ಕಿಡಿ ಕಾರಿದ್ದಾರೆ.