ಲಂಡನ್: ಬ್ರಿಟನ್ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಅಶೋಲಿಯನ್ ವಸ್ತು ಸಂಗ್ರಹಾಲಯದಲ್ಲಿದ್ದ 16ನೇ ಶತಮಾನದ ಕಂಚಿನ ವಿಗ್ರಹವನ್ನು ಭಾರತಕ್ಕೆ ಮರಳಿಸಲಾಗಿದೆ.
1967ರಲ್ಲಿ ನಡೆದ ಹರಾಜಿನಲ್ಲಿ ಸಂತ ತಿರುಮಂಕೈ ಆಳ್ವಾರ್ ಅವರ ಪವಿತ್ರ ಪ್ರತಿಮೆಯನ್ನು ಅಶೋಲಿಯನ್ ವಸ್ತು ಸಂಗ್ರಹಾಲಯವು ಕೊಂಡುಕೊಂಡಿತ್ತು.
ಆದರೆ, 2019ರಲ್ಲಿ ಸಂಶೋಧಕರೊಬ್ಬರು ತಮಿಳುನಾಡಿನ ತಾಡಿಕೊಂಬುವಿನ ಶ್ರೀ ಸೌಂದರರಾಜ ಪೆರುಮಾಳ್ ದೇವಸ್ಥಾನವು ಅದರ ಮೂಲ ಎಂದು ಹೇಳಿದ್ದರು.
ಇದರ ನಂತರ, ಅಶೋಲಿಯನ್ ವಸ್ತು ಸಂಗ್ರಹಾಲಯವು ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಈ ಕುರಿತು ಸಂಪರ್ಕಿಸಿತ್ತು. ಇದೀಗ ಆ ವಿಗ್ರಹದ ಮೂಲದ ಕುರಿತು ತನಿಖೆ ಪೂರ್ಣಗೊಂಡಿದ್ದು, ಅದನ್ನು ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆ.
'ಇದು ಅಶೋಲಿಯನ್ ವಸ್ತು ಸಂಗ್ರಹಾಲಯದ ಇತಿಹಾಸದಲ್ಲಿ ನೆನಪಿಡಬೇಕಾದ ಘಟನೆ. ಒಳ್ಳೆಯ ಉದ್ದೇಶದಿಂದ ನಾವು 1967ರಲ್ಲಿ ಆ ವಿಗ್ರಹವನ್ನು ತೆಗೆದುಕೊಂಡಿದ್ದೆವು. ನಂತರ 5 ವರ್ಷಗಳ ಹಿಂದೆ ತಮಿಳುನಾಡಿದ ದೇವಸ್ಥಾನವೊಂದರಲ್ಲಿ ಈ ವಿಗ್ರಹದ ಕುರುವುಗಳಿವೆ ಎಂದು ನಮಗೆ ತಿಳಿಯಿತು. ಭಾರತದಿಂದ ಅದು ಕಾನೂನುಬದ್ದ ಮಾರ್ಗವಾಗಿ ಬಂದಿಲ್ಲ ಎಂದು ತಿಳಿದು ನಾವು ಆ ವಿಷಯವನ್ನು ಭಾರತೀಯ ರಾಯಭಾರ ಕಚೇರಿಗೆ ತಿಳಿಸಿದ್ದೆವು' ಎಂದು ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ. ಕ್ಯಾ ಸ್ವರ್ಗಿಸ್ ಹೇಳಿದ್ದಾರೆ.
ಪ್ರಾಚೀನ ವಸ್ತುಗಳನ್ನು ಮರಳಿಸುತ್ತಿರುವುದು ಭಾರತ ಮತ್ತು ಬ್ರಿಟನ್ ನಡುವಿನ ದ್ವಿಪಕ್ಷೀಯ ಸಂಬಂಧವು ಬಲಗೊಳ್ಳುತ್ತಿರುವ ಸಂಕೇತವಾಗಿದೆ. ಇದರಿಂದ ಕಳ್ಳಸಾಗಣೆಯನ್ನು ತಡೆಗಟ್ಟಬಹುದಾಗಿದೆ ಎಂದು ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ..
ಅಶೋಲಿಯನ್ ವಸ್ತು ಸಂಗ್ರಹಾಲಯವು ಬ್ರಿಟನ್ನ ಮೊದಲ ಸಾರ್ವಜನಿಕ ಮ್ಯೂಸಿಯಂ ಆಗಿದ್ದು, 17ನೇ ಶತಮಾನದಲ್ಲಿ ಆರಂಭವಾಗಿತ್ತು.