ಬೆಂಗಳೂರು: ರಾಜ್ಯದ ನಾಲ್ಕು ಜಿಲ್ಲಾ ನ್ಯಾಯಾಲಯಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು ನ್ಯಾಯಾಲಯಗಳ ಕಲಾಪಕ್ಕೆ ಅಡ್ಡಿ ಉಂಟಾಗಿದೆ. ಚಿತ್ರದುರ್ಗ, ಧಾರವಾಡ, ದಾವಣಗೆರೆ ಮತ್ತು ಮಂಡ್ಯದ ನ್ಯಾಯಾಲಯಗಳಲ್ಲಿ ಈ ಬೆದರಿಕೆ ಕರೆಗಳು ಬಂದಿವೆ. ಇಂದು ಮಧ್ಯಾಹ್ನದ ವೇಳೆಗೆ ಸ್ಫೋಟಗೊಳ್ಳಲಿದೆ ಎಂದು ಉಲ್ಲೇಖಿಸಲಾಗಿತ್ತು.
ಸಹಜವಾಗಿಯೇ ನ್ಯಾಯಾಲಯಗಳ ಆವರಣದಲ್ಲಿ ಆತಂಕ ಮೂಡಿತ್ತು. ವಿಷಯ ತಿಳಿದು ಬರುತ್ತಿದ್ದಂತೆ ವಕೀಲರು, ನ್ಯಾಯಾಧೀಶರು ಮತ್ತು ಸಿಬ್ಬಂದಿ ಹೊರ ಬಂದಿದ್ದಾರೆ.
ನಾಲ್ಕೂ ನ್ಯಾಯಾಯಲಗಳಲ್ಲಿ ಕಲಾಪ ಸ್ಥಗಿತಗೊಳಿಸಲಾಗಿದ್ದು, ಬಾಂಬ್ ಶೋಧಕ ದಳ ಮತ್ತು ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ. ಯಾವುದೇ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆಯಲ್ಲಿ ಇದು ಸುಳ್ಳು ಬೆದರಿಕೆ ಎಂದು ತಿಳಿದುಬಂದಿದೆ.
ಇದೊಂದು ಹುಸಿ ಬೆದರಿಕೆ ಎಂದು ತಿಳಿದು ಬರುತ್ತಿದ್ದಂತೆ ಎಂದಿನಂತೆ ಕಲಾಪ ನಡೆಯಿತು.