ಬೆಂಗಳೂರು : ನಗರದ ಸಾದರಮಂಗಲ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಭಾರೀ ಅನಾಹುತವೊಂದು ತಪ್ಪಿದೆ. ಡಿಪೋ–51ಕ್ಕೆ ಸೇರಿದ ಬಿಎಂಟಿಸಿ ಬಸ್ (ನಂ. KA57 F 6000) ಗೆ ರೈಲು ಡಿಕ್ಕಿ ಹೊಡೆದ ಘಟನೆ ಬೆಳಿಗ್ಗೆ 9.45 ರಿಂದ 10 ಗಂಟೆ ಸುಮಾರಿಗೆ ನಡೆದಿದೆ.ಡಿಪೋದಿಂದ ಕಾಡುಗೋಡಿ ಬಸ್ ಸ್ಟ್ಯಾಂಡ್ಗೆ ತೆರಳುತ್ತಿದ್ದ ಬಿಎಂಟಿಸಿ ಬಸ್, ಸಾದರಮಂಗಲದ ರೈಲ್ವೆ ಪ್ಯಾರಲ್ ರೋಡ್ನಲ್ಲಿ ರಿವರ್ಸ್ ತೆಗೆದುಕೊಳ್ಳುವ ವೇಳೆ, ಚಾಲಕನ ಅಜಾಗರೂಕತೆಯಿಂದ ರೈಲ್ವೆ ಟ್ರ್ಯಾಕ್ ಮೇಲೆ ಬಸ್ ನಿಲ್ಲಿಸಿದ್ದಾನೆ. ಈ ವೇಳೆ ಬರುತ್ತಿದ್ದ ರೈಲು ಬಸ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ..
ಅಪಘಾತದ ಪರಿಣಾಮ ಬಿಎಂಟಿಸಿ ಬಸ್ನ ಹಿಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಬಸ್ ತೀವ್ರ ಹಾನಿಗೊಳಗಾಗಿದೆ. ಅದೃಷ್ಟವಶಾತ್, ಘಟನೆ ಸಂಭವಿಸಿದ ವೇಳೆ ಬಸ್ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ, ಇದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.
ಆದರೆ ಬಸ್ನಲ್ಲಿದ್ದ ಕಂಡಕ್ಟರ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಸ್ ಚಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ರೈಲ್ವೆ ಟ್ರ್ಯಾಕ್ ಬಳಿ ನಿರ್ಲಕ್ಷ್ಯ ವಹಿಸಿ ಬಸ್ ರಿವರ್ಸ್ ತೆಗೆದುಕೊಂಡಿರುವುದು ಈ ಘಟನೆಗೆ ದಾರಿ ಮಾಡಿಕೊಟ್ಟಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ರೈಲ್ವೆ ಮತ್ತು ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.