ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಕಸದ ರಾಶಿಯಾಗುವತ್ತ ಸಾಗುತ್ತಿದೆ. ಕಸವನ್ನು ಸುರಿಯದಂತೆ ಬೆಂಗಳೂರಿನಿಂದ ಹೊರಟ ಕಸದ ಲಾರಿಗಳಿಗೆ ಅಡ್ಡಿ ಪಡಿಸಲಾಗುತ್ತಿದೆ. ಮಹದೇವಪುರ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಬೆಳ್ಳಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತೆರಳುತ್ತಿದ್ದ ಲಾರಿಗಳಿಗೆ ಸ್ಥಳೀಯರು ದಿಗ್ಬಂಧನ ಹಾಕಿದ್ದಾರೆ. ಸ್ಥಳೀಯ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರ ಕುಮ್ಮಕ್ಕಿನಿಂದ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರ ಎಂದು ಸರ್ಕಾರ ಆರೋಪಿಸುತ್ತಿದೆ.
ಆದರೆ ಪ್ರತಿಭಟನಾಕಾರರು ಕಳೆದ 2 ವರ್ಷಗಳಿಂದ ಗ್ರಾಮದ ಅಭಿವೃದ್ದಿಗೆ ಅನುದಾನ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಾಗಲೂರಿನಲ್ಲೂ ಕಸದ ಲಾರಿಗಳಿಗೆ ಅಡ್ಡಿಪಡಿಸಲಾಗುತ್ತಿದೆ. ಬಾಗಲೂರು ರಸ್ತೆಯಲ್ಲಿ ಕಸದ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಬಾಲಕನೊಬ್ಬ ಅಸುನೀಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಕಸ ಸುರಿಯಲು ಅವಕಾಶ ನೀಡಿಲ್ಲ. ಈ ಕಸವನ್ನು ದೊಡ್ಡಬಳ್ಳಾಪುರ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸಲು ಸೂಚನೆ ನೀಡಲಾಗಿತ್ತು. ಅಲ್ಲಿಯೂ ವಿರೋಧ ವ್ಯಕ್ತವಾಗಿದೆ.
ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲೇ ಪ್ರತಿಭಟನೆ ನಡೆದಿದೆ. ಮಂಕಲಾಳದ ಬಳಿ ಕಸದ ಲಾರಿಗಳಿಗೆ ತಡೆ ಒಡ್ಡಲಾಗಿದೆ. ಹಾಗಾಗಿ ಲಾರಿಗಳು ಸುಮ್ಮನೆ ನಿಂತಿವೆ.
ಕಸ ಎತ್ತಲು ಯೋಗ್ಯತೆ ಇಲ್ಲ:
ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಸರ್ಕಾರಕ್ಕೆ ಬೆಂಗಳೂರಿನಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡಲು ಆಗುತ್ತಿಲ್ಲ. ಕಸ ಎತ್ತಲು ಸಹ ಇವರಿಗೆ ಯೋಗ್ಯತೆ ಇಲ್ಲ. ಇನ್ನೆರಡು ದಿನ ಕಳೆದರೆ ಸಿಲಿಕಾನ್ ಸಿಟಿ ಗಾರ್ಬೇಜ್ ಸಿಟಿ ಆಗುತ್ತದೆ. ಗ್ರಾಮಗಳಿಗೆ ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಅಗ್ರಹಪಡಿಸಿದ್ದಾರೆ.