ಬೆಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಪತ್ರಕರ್ತ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಪಿ ರಾಮಯ್ಯ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವದೊಡನೆ ನಡೆಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಇದೀಗ ಓರ್ವ ವ್ಯಾಪಾರಿಯ ಮೂಲಕ, ಪೊಲೀಸ್ ಇಲಾಖೆ ರಾಮಯ್ಯನವರ ಕುಟುಂಬಕ್ಕೆ ಖರ್ಚು ವೆಚ್ಚದ ಬಿಲ್ ಕಳುಹಿಸಿದೆ. ಗಣ್ಯ ವ್ಯಕ್ತಿಗಳ ಭೇಟಿಗೆ ನಡೆಸಿದ ಸಿದ್ಧತೆಗಳು, ಬ್ಯಾರಿಕೇಡ್ ಅಳವಡಿಕೆ, ಭದ್ರತಾ ವ್ಯವಸ್ಥೆ, ಮತ್ತು ಇತರ ಲಾಜಿಸ್ಟಿಕ್ ಸಿದ್ಧತೆಗಳಿಗೆ ಹಣ ಪಾವತಿಸುವಂತೆ ಕುಟುಂಬಸ್ಥರಿಗೆ ಆ ಬಿಲ್ ನೀಡಲಾಗಿತ್ತು.
ಸರ್ಕಾರದ ಈ ಕ್ರಮವನ್ನು ಬಿಜೆಪಿ ಶಾಸಕ ಡಾ.ಸಿಟಿ ರವಿ ತೀವ್ರವಾಗಿ ಖಂಡಿಸಿದ್ದಾರೆ. ಎಕ್ಸ್ ನಲ್ಲಿ ಅವರು @Siddaramaiah ನೇತೃತ್ವದ @INCKarnataka ಸರ್ಕಾರ ಅಂತಿಮ ಗೌರವದ ಹೆಸರಲ್ಲಿ ಮೃತರಿಗೆ ಅಗೌರವ, ಅವಮಾನ ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.
ದ ಹಿಂದೂ ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿ, ಐದು ದಶಕಗಳ ಕಾಲ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಿ, ವಿಧಾನ ಪರಿಷತ್ ಸದಸ್ಯರಾಗಿದ್ದ ಪಿ ರಾಮಯ್ಯ ಅವರ ನಿಧನದ ನಂತರ ಸ್ವತಃ ಮುಖ್ಯಮಂತ್ರಿಗಳೇ ಸರ್ಕಾರಿ ಗೌರವದೊಡನೆ ಅಂತ್ಯಸಂಸ್ಕಾರ ನಡೆಸುವುದಾಗಿ ಘೋಷಿಸಿದ್ದರು. ಆದರೆ, ಅಂತ್ಯಸಂಸ್ಕಾರ ನಡೆದ ಮರುದಿನವೇ ರಾಮಯ್ಯನವರ ಕುಟುಂಬಕ್ಕೆ ಸರ್ಕಾರಿ ಗೌರವ ಸಲ್ಲಿಸಿದ್ದಕ್ಕೆ, ಮುಖ್ಯಮಂತ್ರಿಗಳ ಭೇಟಿಗೆ ಆದ ವೆಚ್ಚವನ್ನು ಭರಿಸುವಂತೆ ರಾಮಯ್ಯನವರ ಕುಟುಂಬಸ್ಥರಿಗೆ ಪೊಲೀಸ್ ಇಲಾಖೆ ಬಿಲ್ ನೀಡಿದೆ!
ಇದು ಅಂತಿಮ ಗೌರವವಲ್ಲ, ಬದಲಿಗೆ ಮೃತರಿಗೆ ಸಲ್ಲಿಸಿರುವ ಅಗೌರವ, ಅವಮಾನ. ತಕ್ಷಣವೇ ಸರ್ಕಾರ ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದೂ ಆಗ್ರಹಪಡಿಸಿದ್ದಾರೆ.