ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಸತಿ ಶಾಲೆಯಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಾಲೀಕ ಧನಂಜಯ್, ಬಾಲಕಿಯರ ಹಾಸ್ಟೆಲ್ ಗೆ ಅನುಮತಿಯನ್ನೇ ಪಡೆಯದೇ ಅನಧಿಕೃತವಾಗಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಲೈಸೆನ್ಸ್ ನವೀಕರಿಸದೇ ಹಾಗೂ ಪರವಾನಗಿ ಇಲ್ಲದೆ ವಸತಿ ಶಾಲೆ ನಡೆಸುತ್ತಿದ್ದ ಧನಂಜಯ್ ಗೆ ಆತನ ಪತ್ನಿ ಶೈಲಜಾ ಕೂಡ ಬಾಲಕಿಯ ಮೇಲಿನ ದೌರ್ಜನ್ಯಕ್ಕೆ ಸಾಥ್ ನೀಡಿದ್ದಳು. ಆರೋಪಿ ಧನಂಜಯ್ ಬಾಲಕರ ಹಾಸ್ಟೆಲ್ಗೆ ಮಾತ್ರ ಅನುಮತಿ ಪಡೆದಿದ್ದ. ಬಾಲಕಿಯರ ವಸತಿ ವ್ಯವಸ್ಥೆಯನ್ನು ಅನುಮತಿ ಇಲ್ಲದೆ ಅಕ್ರಮವಾಗಿ ನಡೆಸುತ್ತಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ.
ಕಳೆದ ವರ್ಷದಿಂದ ಬಾಲಕರ ಹಾಸ್ಟೆಲ್ ಲೈಸನ್ಸ್ ನವೀಕರಣವೂ ಮಾಡಿಸದೇ ಆಡಳಿತ ಮಂಡಳಿ ವಸತಿ ಶಾಲೆ ನಡೆಸುತ್ತಿತ್ತು. ದೌರ್ಜನ್ಯದ ಘಟನೆ ಬಹಿರಂಗವಾದ ನಂತರವೇ ಹಾಸ್ಟೆಲ್ ಕಾರ್ಯಾಚರಣೆ ಕುರಿತು ಗಮನಕ್ಕೆ ಬಂದಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ವಸತಿ ಶಾಲೆ ನಡೆಸಲು ಸಮಾಜ ಕಲ್ಯಾಣ ಇಲಾಖೆಯ ಅನುಮತಿ ಅಗತ್ಯವೆಂದು ಡಿಡಿಪಿಐ ಸ್ಪಷ್ಟಪಡಿಸಿದ್ದರೆ, ಖಾಸಗಿ ಶಾಲೆಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಸಮಾಜ ಕಲ್ಯಾಣ ಇಲಾಖೆ ಹೇಳಿದೆ. ಇದರಿಂದ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಹಾಗೂ ನಿರ್ಲಕ್ಷ್ಯ ಬಯಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಸಹೋದರಿಯರಿಗೆ ಮಾಲೀಕ ಧನಂಜಯ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪದಡಿ ದೂರು ದಾಖಲಿಸಿದ್ದಾರೆ. ಧನಂಜಯ್ ರಾತ್ರಿವೇಳೆ ಮದ್ಯದ ಅಮಲಿನಲ್ಲಿ ಬಾಲಕಿಯರ ಕೊಠಡಿಗೆ ತೆರಳಿ, ಒಮ್ಮೊಮ್ಮೆ ವಾರ್ಡನ್ ಕೊಠಡಿಗೆ ಕರೆಸಿ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸಲಾಗದೇ ಮಕ್ಕಳು ಆತನ ಪತ್ನಿ ಶೈಲಜಾಗೆ ಈ ಬಗ್ಗೆ ಹೇಳಿದ್ದರು. ಆದರೆ ಆಕೆಯೂ ಗಂಡನ ನೀಚ ಕೃತ್ಯಕ್ಕೆ ಸಾಥ್ ನೀಡಿ, ಕಿರುಕುಳದ ಬಗ್ಗೆ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದಳು. ಅಲ್ಲದೇ ಇಬ್ಬರು ಮಕ್ಕಳನ್ನು ಹೊರ ಹೋಗದಂತೆ 8 ದಿನಗಳ ಕಾಲ ಕೂಡಿ ಹಾಕಿ ಹಿಂಸಿಸಿದ್ದರಂತೆ. ಸದ್ಯ ಆರೋಪಿ ಧನಂಜಯ್ ಹಾಗೂ ಪತ್ನಿ ಶೈಲಜಾ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.