ದೀರ್ಘಕಾಲದ ಬೇಡಿಕೆ ಮತ್ತು ಹೋರಾಟಗಳ ಬಳಿಕ, ರಾಜ್ಯ ಸರ್ಕಾರವು ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ನಾಲ್ಕು ಸಾರಿಗೆ ನಿಗಮಗಳ ನೌಕರರ ಬಾಕಿ ವೇತನ ಹಿಂಬಾಕಿಯನ್ನು ಪಾವತಿಸಲು ಮೊದಲ ಹಂತವಾಗಿ ₹450 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೆಎಸ್ಆರ್ಟಿಸಿ ₹143.85 ಕೋಟಿ, ಬಿಎಂಟಿಸಿ ₹137.24 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ₹87.00 ಕೋಟಿ,ಕಲ್ಯಾಣ ಕರ್ನಾಟಕ ಸಾರಿಗೆ ₹81.91 ಕೋಟಿ.
ಒಟ್ಟು 26 ತಿಂಗಳ ವೇತನ ಬಾಕಿಯಾಗಿ ₹1,271.92 ಕೋಟಿ ಪಾವತಿಸಬೇಕಿದ್ದು, ಪ್ರಸ್ತುತ ಲಭ್ಯವಿರುವ ಹಣಕಾಸಿನ ಆಧಾರದಲ್ಲಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರ ಮೊದಲ ಹಂತದ ಹಣ ಬಿಡುಗಡೆ ಮಾಡಿರುವುದನ್ನು ನೌಕರರ ಸಂಘಟನೆಗಳು ಸ್ವಾಗತಿಸಿವೆ. ಆದಾಗ್ಯೂ, ಬಾಕಿ ಇರುವ ಉಳಿದ ₹821.92 ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ನೌಕರರ ಒಕ್ಕೂಟಗಳು ಒತ್ತಾಯಿಸಿವೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೌಕರರು ನೀಡಿದ್ದಾರೆ.