ಬೆಂಗಳೂರು: ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಇಂದು ಬಿಡದಿಯ ರೈತ ಪ್ರತಿನಿಧಿಗಳ ಜೊತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ, ರರತ ಮುಖಂಡರಾದ ಮುಖಂಡರಾದ ಗಾಣಕಲ್ ನಟರಾಜ್, ರೈತ ಮುಖಂಡರಾದ ರಾಜಣ್ಣ ಹೊಸೂರು, ಸಿದ್ದರಾಜು, ಮಂಜುನಾಥ, ಶಿವರಾಮು ಜಯರಾಮಯ್ಯ, ಕೃಷ್ಣಮೂರ್ತಿ, ವಿಶ್ವನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ಅವರು ಅಂದಾಜು ಶೇ. 80ರಷ್ಟು ರೈತರು ಸರ್ಕಾರ ನೀಡುತ್ತಿರುವ ಪರಿಹಾರಕ್ಕೆ ಒಪ್ಪಿಗೆ ಸೂಚಿಸಿದ್ದು, ಆದಷ್ಟು ಬೇಗ ಪರಿಹಾರ ಒದಗಿಸುವಂತೆ ರೈತರು ಮನವಿ ಮಾಡಿಕೊಂಡಿದ್ದಾರೆ. ಒಪ್ಪಿಗೆ ಸೂಚಿಸಿದ ಎಲ್ಲಾ ರೈತರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಂದಿನ ಮೂರು ದಿನಗಳಲ್ಲಿ ನೋಟಿಫಿಕೇಷನ್ ಆಗಿ, ಜೂನ್ ಮೊದಲನೇ ವಾರದಿಂದ ರೈತರಿಗೆ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಟೌನ್ಶಿಪ್ ಬಗ್ಗೆ ಪ್ರಸ್ತಾಪಿಸಿದ್ದರು. ಈಗ ವಿರೋಧ ಮಾಡುತ್ತಿರುವುದು ಏಕೆ ಎಂದು ತಿರುಗೇಟು ನೀಡಿ ಜೆಡಿಎಸ್ ನಾಯಕರೊಂದಿಗೆ ಅವರು ಆಯ್ಕೆ ಮಾಡಿದ ಯಾವುದೇ ಸ್ಥಳ ಮತ್ತು ಸಮಯದಲ್ಲಿ ಸಾರ್ವಜನಿಕ ಚರ್ಚೆಗೆ ನಾನು ಸಿದ್ಧ ಎಂದರು.
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಗ್ರಾಮವಾರು ಅಂತಿಮ ಅಧಿಸೂಚನೆಗಳನ್ನು ಹೊರಡಿಸಲಾಗುವುದು ಮತ್ತು ಪರಿಹಾರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಟೌನ್ಶಿಪ್ ಯೋಜನೆ ಬಗ್ಗೆ ಸರ್ಕಾರ ಪ್ರಕಟಿಸಿರುವ ಪರಿಹಾರ ಕ್ರಮಗಳು ಮತ್ತು ಭೂಮಿ ಸ್ವಾಧೀನ ಪ್ರಕ್ರಿಯೆ ಕುರಿತು ರೈತರಿಗೆ ವಿವರ ನೀಡಲಾಗಿದ್ದು, ಅವರು ಒಪ್ಪಿಕೊಂಡಿದ್ದಾರೆ. ಜೂನ್ 30ರೊಳಗೆ ಎಲ್ಲಾ ಸಂಬಂಧಿತ ನೋಟಿಫಿಕೇಶನ್ಗಳನ್ನು ಪೂರ್ಣಗೊಳಿಸುವ ಗುರಿ ಇದೆ ಎಂದು ತಿಳಿಸಿದರು.