ಬೆಂಗಳೂರು: ಇಂದಿನ ದಿನಮಾನಗಳಲ್ಲಿ ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ಮೊರೆಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಸುರಕ್ಷತೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಮನವಿ ಸಲ್ಲಿಸಿದ್ದಾರೆ.
ಆನ್ಲೈನ್ ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ, ಶೋಷಣೆ, ಕಿರುಕುಳ, ಬ್ಲ್ಯಾಕ್ ಮೇಲ್, ಮತ್ತು ಮಕ್ಕಳ ದುರ್ಬಳಕೆ, ವಿಷಯವನ್ನು ಕೇಂದ್ರಿಕರಿಸಿ, ಮಕ್ಕಳನ್ನು ಆನ್ಲೈನ್ ಮತ್ತು ಸಾಮಾಜಿಕ ಜಾಲತಾಣಗಳಿಂದ ರಕ್ಷಿಸುವುದು ತುರ್ತು ಅಗತ್ಯವಿದೆ.
ಇಂದಿನ ಆಧುನಿಕತೆ ಭರಾಟೆಯಲ್ಲಿ ಮಕ್ಕಳು ಖಿನ್ನತೆಗೆ ಒಳಗಾಗಿ ಸಾವು-ನೋವು ಮಧ್ಯೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಸ್ಥ-ಸದೃಢವಾಗಿ ಸರ್ವರೊಂದಿಗೆ ಉತ್ಸಾಹ ಮತ್ತು ಕ್ರಿಯಾಶೀಲವಾಗಿ ಎಲ್ಲಾ ವಿಷಯಗಳಲ್ಲಿ ಬೆರೆಯಬೇಕು ಎನ್ನುವುದು ವಿಶ್ವಸಂಸ್ಥೆ ಮಕ್ಕಳ ಒಡಂಬಡಿಕೆ, ಬಾಲ ನ್ಯಾಯ ಕಾಯ್ದೆ ಹಾಗೂ ಆಯೋಗದ ಕಳಕಳಿಯಾಗಿದೆ.
ಇತ್ತೀಚಿನ ದಿನಮಾನಗಳಲ್ಲಿ ಮೊಬೈಲ್ ಗೀಳಿಗೆ ಒಳಪಟ್ಟ ಮಕ್ಕಳು ಆತಂತರಿಕವಾಗಿ ಕುಗ್ಗುವುದರ ಜೊತೆಗೆ ಜೀವ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಚೈಲ್ಡ್ ಫಂಡ್ ಇಂಡಿಯಾ ಇವರ ಸಹಯೋಗದಲ್ಲಿ ರಾಜ್ಯದಲ್ಲಿ ಮಕ್ಕಳ ಆನ್ ಲೈನ್ ಅಪಾಯಗಳ ಕುರಿತು ವಿಶೇಷ ಅಧ್ಯಯನದ ಮೂಲಕ ವಿಸ್ತೃತವಾಗಿ ವರದಿ ತಯಾರಿಸಿ, ಬಿಡುಗಡೆಗೊಳಿಸಿದ್ದು ಉತ್ತಮ ಕಾರ್ಯ. ಈ ವಿಚಾರನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು ಎಂದು ಶಶಿಧರ ಕೋಸಂಬೆ ತಿಳಿಸಿದ್ದಾರೆ.