ಬೆಂಗಳೂರು: ಎಸ್ಸಿ ಎಸ್ಪಿ– ಟಿಎಸ್ಪಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಮತ್ತು ಈ ಬಾರಿಯ ಬಜೆಟ್ ನಲ್ಲಿ ಪರಿಶಿಷ್ಟ ಸಮುದಾಯಕ್ಕೆ ಹೆಚ್ಚಿನ ಅನುದಾನ ನಿಗದಿ ಮಾಡಬೇಕು ಎಂದು ಪರಿಶಿಷ್ಟ ಜಾತಿ ಪ್ರತಿನಿಧಿಸುವ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಬಜೆಟ್ ಪೂರ್ವ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಪರಿಶಿಷ್ಟ ಜಾತಿಯ ಶಾಸಕರು ಈ ಮನವಿ ಸಲ್ಲಿಸಿದ್ದಾರೆ.
ನಂತರ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ, ಪರಿಶಿಷ್ಟರಿಗೆ ಅನುದಾನ ನಿಗದಿ ಮಾಡಬೇಕು ಎಂದು ಕಾನೂನು ತಂದದ್ದೆ ಸಿದ್ದರಾಮಯ್ಯ ಅವರು. ಈ ವರ್ಗಕ್ಕೆ ಕಳೆದ ವರ್ಷ ರೂ.42 ಸಾವಿರ ಕೋಟಿ ಹಣ ಮೀಸಲಿಡಲಾಗಿತ್ತು. ಆದರೆ, ಆ ಅನುದಾನವನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿತ್ತು. ಈ ವರ್ಷ ಹಾಗೆ ಮಾಡದಂತೆ ಪರಿಶಿಷ್ಟರಿಗೆ ಮಾತ್ರ ಬಳಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಸರ್ಕಾರದಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 42 ಸಾವಿರ ಹುದ್ದೆಗಳು ಎಸ್ಸಿ– ಎಸ್ಟಿ ವರ್ಗಗಳಿಗೆ ಸೇರಿವೆ. ಆದ್ದರಿಂದ ಆದಷ್ಟೂ ತ್ವರಿತವಾಗಿ ಈ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನೂ ಭರ್ತಿ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಹೇಳಿದರು.
ಸಧ್ಯಕ್ಕೆ ಎಸ್ಸಿ–ಎಸ್ಟಿ ಶಾಸಕರು ರಾಹುಲ್ಗಾಂಧಿ ಅವರನ್ನುಭೇಟಿ ಮಾಡುವ ಸಂದರ್ಭ ಉದ್ಭವವಾಗಿಲ್ಲ. ಅಗತ್ಯವೂ ಇಲ್ಲ. ಹೈಕಮಾಂಡ್ ಬಳಿಗೆ ಹೋಗುವ ಮುನ್ನ ಇಲ್ಲೇ ಬಗೆಹರಿಸಿಕೊಳ್ಳುತ್ತೇವೆ ಎಂದರು.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ ಇದೇ ಮೊದಲ ಬಾರಿಗೆ ಪರಿಶಿಷ್ಟ ಸಮುದಾಯದ ಬೇಡಿಕೆಗಳ ಕುರಿತು ಬಜೆಟ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪರಿಶಿಷ್ಟಜಾತಿಗೆ ಮೀಸಲಾದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಎಂದು ಮನವಿ ಮಾಡಿದ್ದೇವೆ ಎಂದರು.