ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಾಲುದಾರಿಗಳನ್ನು ಅತಿಕ್ರಮಿಸಿದ್ದ ಅಂಗಡಿ-ಮುಂಗಟ್ಟುಗಳು ಹಾಗೂ ರಸ್ತೆಬದಿಯಲ್ಲಿ ಧೂಳು ಹಿಡಿಯುತ್ತಿದ್ದ ಅನಾಥ ವಾಹನಗಳನ್ನು ಜಪ್ತಿ ಮಾಡಿ ಸಾರ್ವಜನಿಕರಿಗೆ ಹಾದಿ ಸುಗಮಗೊಳಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಈಗ ತನ್ನ ಮುಂದಿನ ಬಿಗ್ ಮಿಷನ್ಗೆ ಸಜ್ಜಾಗಿದೆ. ಕಂದಾಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಕ್ರಮವಾಗಿ ರಾಜಕಾಲುವೆಗಳನ್ನು ನುಂಗಿ ನೀರು ಕುಡಿದಿರುವ ಪ್ರಭಾವಿಗಳಿಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ.
ಫುಟ್ಪಾತ್ ಕ್ಲಿಯರೆನ್ಸ್ ಕಾರ್ಯಾಚರಣೆಯ ಯಶಸ್ಸಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಮಳೆ ಬಂದಾಗ ಇಡೀ ಬೆಂಗಳೂರು ಜಲಾವೃತಗೊಳ್ಳುವ ಕಷ್ಟಕ್ಕೆ ಕೊನೆ ಹಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ನಗರದ ಪ್ರವಾಹ ಸ್ಥಿತಿಗೆ ಮೂಲ ಕಾರಣವಾಗಿರುವ ರಾಜಕಾಲುವೆ ಒತ್ತುವರಿಗಳನ್ನು ತೆರವುಗೊಳಿಸಲು ಜಿಬಿಎ ಮೂಲಕ ಬೃಹತ್ ಡ್ರೈವ್ ಆರಂಭಿಸಲಾಗುವುದು ಎಂದಿದ್ದಾರೆ. ಒತ್ತುವರಿ ಮಾಡಿದವರು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಅಥವಾ ಪ್ರಭಾವ ಹೊಂದಿದ್ದರೂ ಕಾನೂನಿನಿಂದ ವಿನಾಯಿತಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಬೆಂಗಳೂರಿನ ಉದ್ದಗಲಕ್ಕೂ ರಾಜಕಾಲುವೆಗಳನ್ನು ಎಲ್ಲೆಲ್ಲಿ ಅತಿಕ್ರಮಿಸಲಾಗಿದೆ ಎಂಬುದರ ಸಮಗ್ರ ಸರ್ವೇ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಸರ್ವೇ ವರದಿ ಕೈಸೇರುತ್ತಿದ್ದಂತೆಯೇ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ಗಳು ಕಾರ್ಯಾಚರಣೆ ಆರಂಭಿಸಲಿವೆ. ರಾಜಕಾಲುವೆಗಳಲ್ಲಿ ನೀರಿನ ಸಹಜ ಹರಿವಿಗೆ ಅಡ್ಡಿಯಾಗಿರುವ ನಿರ್ಮಾಣಗಳನ್ನು ತೆರವುಗೊಳಿಸಿದರೆ, ಮಳೆಗಾಲದಲ್ಲಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗುವ ಅವಾಂತರ ತಪ್ಪಲಿದೆ ಎಂಬುದು ಸರ್ಕಾರದ ಸ್ಪಷ್ಟ ಯೋಜನೆಯಾಗಿದೆ.