ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಟ್ಟಿರುವುದರಿಂದ ದೇಶದ ರೈತರು, ಎಂಎಸ್ಎಂಇ, ಕರಕುಶಲ ವಸ್ತುಗಳು, ಕೈಮಗ್ಗಗಳ ಹಿತಾಸಕ್ತಿಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಪ್ರತಿಪಾದಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮನಿರ್ಭರ ಭಾರತದ ಭಾಗವಾಗಿರುವ ಉತ್ಪನ್ನಗಳನ್ನು ಅಮೆರಿಕ–ಭಾರತ ಒಪ್ಪಂದದಿಂದ ಹೊರಗಿಡಲಾಗಿದೆ. ಕೆಲವು ಕೃಷಿ ಉತ್ಪನ್ನಗಳು ಸೇರಿದಂತೆ ಭಾರತದ ಸರಕುಗಳ ಮೇಲೆ ಶೂನ್ಯ ಸುಂಕ ನೀತಿ ಹೊಂದಿದೆ ಎಂದು ಅವರು ತಿಳಿಸಿದರು.
ಕೃಷಿ ಹಾಗೂ ಡೇರಿ ಉತ್ಪನ್ನಗಳು ಸೇರಿದಂತೆ ಮೆಕ್ಕೆಜೋಳ, ಗೋಧಿ, ಅಕ್ಕಿ, ಸೋಯಾ, ಹಾಲು, ಚೀಸ್, ಎಥೆನಾಲ್ (ಇಂಧನ), ತಂಬಾಕು, ಮಾಂಸ ಹಾಗೂ ನಿರ್ದಿಷ್ಠ ತರಕಾರಿಗಳಿಗೆ ಸಂಬಂಧಿಸಿದಂತೆ ಅಮೆರಿಕಕ್ಕೆ ಯಾವುದೇ ಸುಂಕ ರಿಯಾಯಿತಿ ಇರುವುದಿಲ್ಲ. ವ್ಯಾಪಾರ ಒಪ್ಪಂದದಲ್ಲಿ ಆಟೊ, ವಿಮಾನ ಬಿಡಿಭಾಗಗಳು ಸೇರಿದಂತೆ ಇನ್ನಿತರೆ ವಸ್ತುಗಳ ಮೇಲೆ ಸುಂಕ ರಹಿತ ರಫ್ತು ವ್ಯವಸ್ಥೆ ಒದಗಿಸಲಾಗಿದೆ ಎಂದೂ ಅವರು ವಿವರಿಸಿದರು.
ಮದ್ಯ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಸರಕುಗಳು ಸೇರಿದಂತೆ ಸೌಂದರ್ಯವರ್ಧಕಗಳ ಮೇಲೆ ಅಮೆರಿಕಕ್ಕೆ ಸುಂಕ ರಿಯಾಯಿತಿ ನೀಡಲಾಗಿದೆ. ಒಟ್ಟಾರೆ ಅಮೆರಿಕ ದೇಶದ ಜತೆಗಿನ ಒಪ್ಪಂದದಿಂದ ರೈತರು, ಎಂಎಸ್ಎಂಇ, ಕರಕುಶಲ ವಸ್ತುಗಳು, ಕೈಮಗ್ಗಗಳ ಹಿತಾಸಕ್ತಿಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗುವುದಿಲ್ಲ ಎಂದು ಅವರು ಒತ್ತಿ ತಿಳಿಸಿದ್ದಾರೆ.