ಬೆಂಗಳೂರು: ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಚುರುಕು ನೀಡುವ ಉದ್ದೇಶದಿಂದ ಬೆಂಗಳೂರು ಕೇಂದ್ರ ಜಿಲ್ಲೆಯಲ್ಲಿ ಬಿಜೆಪಿ ಹೊಸ ಅಧ್ಯಕ್ಷರನ್ನು ಘೋಷಿಸಿದೆ. ಜಿಲ್ಲಾಧ್ಯಕ್ಷ ಎ.ಆರ್. ಸಪ್ತಗಿರಿ ಗೌಡ ಅಧಿಕೃತ ಪ್ರಕಟಣೆ ಮೂಲಕ ವಿವಿಧ ಮೋರ್ಚಾಗಳ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ವಿಶೇಷ ಗಮನ ಸೆಳೆದಿದ್ದು ನಟಿ ಅಮೂಲ್ಯ ಅವರ ಪತಿ ಜಗದೀಶ್ ಆರ್. ಚಂದ್ರ ಅವರಿಗೆ ಯುವ ಮೋರ್ಚಾ ಅಧ್ಯಕ್ಷ ಸ್ಥಾನ ಲಭಿಸಿರುವುದು. ಇತ್ತೀಚಿನ ಅವಧಿಯಲ್ಲಿ ಪಕ್ಷದ ಸಂಘಟನಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಅವರು ಈಗ ಪ್ರಮುಖ ಜವಾಬ್ದಾರಿ ಹೊತ್ತಿದ್ದಾರೆ.
ಜಗದೀಶ್ ಅವರ ಕುಟುಂಬಕ್ಕೂ ರಾಜಕೀಯ ಹಿನ್ನೆಲೆ ಇದ್ದು, ಅವರ ಮಾವ ಜಿ.ಹೆಚ್. ರಾಮಚಂದ್ರ ಕೂಡ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಹೀಗಾಗಿ ಈ ನೇಮಕಾತಿ ಪಕ್ಷದ ವಿಶ್ವಾಸದ ಪ್ರತೀಕವೆಂದು ಹೇಳಲಾಗುತ್ತಿದೆ. ಇನ್ನು ಮಹಿಳಾ ಮೋರ್ಚಾ - ನೀತಾ ಎಂ.ಎನ್. ರೆಡ್ಡಿ, ಎಸ್.ಸಿ. ಮೋರ್ಚಾ - ಮುನಿಯಲ್ಲಪ್ಪ ಹಿಂದುಳಿದ ವರ್ಗಗಳ ಮೋರ್ಚಾ - ಹೆಚ್.ಆರ್. ಕೃಷ್ಣಪ್ಪ, ಎಸ್.ಟಿ. ಮೋರ್ಚಾ - ಗಿರೀಶ್ ಕುಮಾರ್ ಬಿ, ರೈತ ಮೋರ್ಚಾ - ರುದ್ರಪ್ಪ ವೈ ನೇಮಕ ಆಗಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಗಳು ಮಹತ್ವ ಪಡೆದಿವೆ.