ನಟ ಯಶ್ (Actor Yash) ಅವರ ತಾಯಿ ಪುಷ್ಪ ಅವರು ಮನೆ ಪಕ್ಕದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಇದೀಗ ಮತ್ತೊಂದು ಆಯಾಮ ಪಡೆದಿದೆ. ಜಾಗಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶವಿದೆ ಎಂದು ಹೇಳಿಕೊಂಡು ಯಶ್ ತಾಯಿ ಹಾಕಿದ್ದ ಕಾಂಪೌಂಡ್ ಅನ್ನು ಜಿಪಿಎ ಹೋಲ್ಡರ್ ದೇವರಾಜ್ ತೆರವುಗೊಳಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು.ದೇವರಾಜ್ ಅವರು ಆರು ವರ್ಷಗಳ ಹಿಂದೆ ಸೈಟ್ ಖರೀದಿಸಿರುವುದಾಗಿ ಹೇಳಿಕೊಂಡು ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು ಎಂಬ ಆರೋಪವನ್ನೂ ಮಾಡಿದ್ದಾರೆ.
ಕಾಂಪೌಂಡ್ ತೆರವುಗೊಳಿಸಿದ ಬಳಿಕ ದೇವರಾಜ್ ಅವರು ಜಾಗದ ಸುತ್ತ ತಂತಿ ಬೇಲಿ ಹಾಕಿದ್ದರು. ಆದರೆ ಇಂದು ಮತ್ತೆ ಯಶ್ ತಾಯಿ ಪುಷ್ಪ ಅವರು ದೇವರಾಜ್ ಹಾಕಿದ್ದ ತಂತಿ ಬೇಲಿಯನ್ನು ತೆರವುಗೊಳಿಸಿ, ಜಾಗಕ್ಕೆ ಮತ್ತೆ ಕಾಂಪೌಂಡ್ ಹಾಕಲು ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ಕೋರ್ಟ್ ಆದೇಶವಿದೆ ಎಂದು ದೇವರಾಜ್ ಹಾಕಿದ್ದ ಬೋರ್ಡ್ನ್ನು ಪುಷ್ಪ ಅವರು ಕಿತ್ತು ಹಾಕಿರುವುದಾಗಿ ತಿಳಿದುಬಂದಿದೆ.
ಈ ವಿಷಯವಾಗಿ ಮನೆ ಮುಂದೆ ಬಂದ ದೇವರಾಜ್ ಅವರಿಗೆ ಯಶ್ ತಾಯಿ ಪುಷ್ಪ ಅವರು ಕಠಿಣವಾಗಿ ತರಾಟೆ ತೆಗೆದುಕೊಂಡಿದ್ದಾರೆ. "ಯಾವುದೋ ಜಾಗಕ್ಕೆ ಸಂಬಂಧಿಸಿದ ದಾಖಲೆ ತಂದಿದ್ದೀಯಾ? ನೀನು ಬಂದು ರೌಡಿಸಂ ಮಾಡುತ್ತಿದ್ದೀಯಾ? ನಾನು ಇದೇ ಊರ ಮಗಳು, ನನ್ನನ್ನು ಹೆದರಿಸಲು ಬರಬೇಡ. ನಾನು ಹೆದರೋಲ್ಲ. ಇದು ನಮ್ಮ ಜಾಗ, ನಾನು ಖರೀದಿ ಮಾಡಿದ್ದೇನೆ. ಕೋರ್ಟ್ ಆದೇಶ ಇದ್ದರೆ ನ್ಯಾಯಾಲಯದ ಮೂಲಕ ಬಾ" ಎಂದು ಪುಷ್ಪ ಅವರು ಆವಾಜ್ ಎತ್ತಿದ್ದಾರೆ ಎನ್ನಲಾಗಿದೆ.ಜಾಗದ ಹಕ್ಕು ಮತ್ತು ದಾಖಲೆಗಳ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯುತ್ತಿದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಲಿದೆ ಎಂಬ ಮಾತುಗಳು ಸ್ಥಳೀಯ ವಲಯದಲ್ಲಿ ಕೇಳಿಬರುತ್ತಿವೆ.