ಮೈಸೂರು: ಡ್ರಗ್ಸ್ ವಿರೋಧಿ ಅಭಿಯಾನಕ್ಕೆ ಬೆಂಬಲ ಸೂಚಿಸಲು ನಟ ವಿನಯ್ ರಾಜ್ ಕುಮಾರ್ ಮೈಸೂರಿನಲ್ಲಿ ನಡೆದ ಜಾಗೃತಿ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡ್ರಗ್ಸ್ ಜಾಲದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಈ ಡ್ರಗ್ಸ್ ವಿರೋಧಿ ಅಭಿಯಾನ ಒಂದು ಸದುದ್ದೇಶದ ಕಾರ್ಯವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ. ನಮ್ಮ ಪೊಲೀಸ್, ನಮ್ಮ ಹೆಮ್ಮೆ' ಎಂಬ ಘೋಷವಾಕ್ಯ ಕೇಳಿದಾಗ ಗೌರವ ಭಾವನೆ ಮೂಡುತ್ತದೆ ಎಂದಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ಪೊಲೀಸರು ದೊಡ್ಡ ಮಟ್ಟದ ಮಾದಕ ವಸ್ತುಗಳ ಜಾಲವನ್ನು ಬಯಲಿಗೆಳೆದಿರುವುದನ್ನು ವಿನಯ್ ರಾಜ್ ಕುಮಾರ್ ಶ್ಲಾಘಿಸಿದ್ದಾರೆ. ಅದಕ್ಕಾಗಿ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೆಲವರು ಮನರಂಜನೆಗಾಗಿ, ಇನ್ನೂ ಕೆಲವರು ವೈಯಕ್ತಿಕ ನೋವಿನಿಂದ ಡ್ರಗ್ಸ್ ಬಳಕೆ ಮಾಡುತ್ತಾರೆ ಎಂದು ವಿನಯ್ ರಾಜ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇಂತಹವರನ್ನು ಶಿಕ್ಷಿಸುವ ಬದಲು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಿ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.