2026-03-07 05:24:49

A verbal spat between the players | ಒಳ್ಳೆ ಸ್ಪಿನ್ನರ್‌ನಂತೆ ಬೌಲಿಂಗ್ ಮಾಡ್ತಿದ್ದೀಯ. ಆಟಗಾರರ ನಡುವೆ ಮಾತಿನ ಚಕಮಕಿ | Speed News Kannada

A verbal spat between the players | ಒಳ್ಳೆ ಸ್ಪಿನ್ನರ್‌ನಂತೆ ಬೌಲಿಂಗ್ ಮಾಡ್ತಿದ್ದೀಯ. ಆಟಗಾರರ ನಡುವೆ ಮಾತಿನ ಚಕಮಕಿ | Speed News Kannada

ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ಆಟಗಾರರ ನಡುವೆ ಮಾತಿನ ಚಕಮಕಿ ಮುಂದುವರೆದಿದೆ. ಈ ಪಂದ್ಯದ ಮೊದಲ ಇನಿಂಗ್ಸ್ ವೇಳೆ ಪರಸ್ ಡೋಗ್ರಾ ಹಾಗೂ ಕೆವಿ ಅನೀಶ್ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು. ಇದೀಗ ಕರ್ನಾಟಕ ವೇಗಿ ವೈಶಾಕ್ ವಿಜಯಕುಮಾ‌ರ್ ಹಾಗೂ ಜಮ್ಮು-ಕಾಶ್ಮೀರ ತಂಡದ ಆರಂಭಿಕ ದಾಂಡಿಗ ಖಮ್ರಾನ್ ಇಟ್ಬಾಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ನಾಲ್ಕನೇ ದಿನದಾಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಎರಡನೇ ಇನ್ನಿಂಗ್ಸ್‌ನ 49ನೇ ಓವರ್‌ನಲ್ಲಿ ವೈಶಾಕ್ ವಿಜಯಕುಮಾರ್ ಎಸೆದ ಬೌನ್ಸರ್ ಎಸೆದಿದ್ದರು. ಈ ಎಸೆತಕ್ಕೆ ಪ್ರತ್ಯುತ್ತರ ನೀಡಲು ಖಮ್ರಾನ್‌ಗೆ ಸಾಧ್ಯವಾಗಿರಲಿಲ್ಲ. ಈ ವೇಳೆ ವೈಶಾಕ್ ಸೈಕರ್‌ನತ್ತ ಗುರಾಯಿಸುವ ಮೂಲಕ ಕೆಣಕಿದ್ದರು.
ಈ ವೇಳೆ ಖಮ್ರಾನ್ ಇಟ್ಬಾಲ್ "ಹೋಗಿ ಬೌಲಿಂಗ್ ಮಾಡು” ಎಂದು ಪ್ರತ್ಯುತ್ತರ ನೀಡಿದ್ದಾರೆ. ಇದಾಗ್ಯೂ ವೈಶಾಕ್ ವಿಜಯಕುಮಾರ್ ಗುರಾಯಿಸುವಿಕೆ ಮುಂದುವರೆಸಿದ್ದರು. ಈ ವೇಳೆ ಖಮ್ರಾನ್ ಇಟ್ಬಾಲ್, ನೀನು ಒಳ್ಳೆ ಸ್ಪಿನ್ನರ್‌ನಂತೆ ಬೌಲಿಂಗ್ ಮಾಡ್ತಿದ್ದೀಯ, ಅಷ್ಟೊಂದು ನಿಧಾನವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ವೈಶಾಕ್ ಮತ್ತಷ್ಟು ವೇಗದಲ್ಲಿ ಚೆಂಡೆಸೆದರು ಆದರೆ ಈ ಎಸೆತದಲ್ಲಿ ಇನ್ಸಾಲ್ ಅದ್ಭುತವಾಗಿ ಸಿಕ್ಸರ್‌ಗೆ ಅಟ್ಟುವ ಮೂಲಕ ತಿರುಗೇಟು ನೀಡಿದರು. ಇದಾದ ಬಳಿಕ ಕೂಡ ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರೆಯಿತು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಅಂಪೈರ್ ರೋಹನ್ ಪಂಡಿತ್ ಅವರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.
ಇನ್ನು ಈ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವು ಗೆಲುವಿನತ್ತ ದಾಪುಗಾಲಿಟ್ಟಿದೆ. ಮೊದಲ ಇನಿಂಗ್ಸ್‌ನಲ್ಲಿ 584 ರನ್ ಪೇರಿಸಿದ್ದ ಕಾಶ್ಮೀರಿ ಪಡೆ ಕರ್ನಾಟಕ ತಂಡವನ್ನು ಕೇವಲ 293 ರನ್ ಗಳಿಗೆ ಆಲೌಟ್ ಮಾಡಿದ್ದರು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 291 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಇದಾಗ್ಯೂ ಫಾಲೋ ಆನ್ ಹೇರದೆ ಜಮ್ಮು-ಕಾಶ್ಮೀರ ತಂಡವು ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ನಾಲ್ಕನೇ ದಿನದಾಟದ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿದೆ. ಸದ್ಯ ಕ್ರೀಸ್‌ನಲ್ಲಿ ಖಮ್ರಾನ್ ಇಟ್ಬಾಲ್ ಹಾಗೂ ಸಾಹಿಲ್ ಲೋಟ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಇದೀಗ ಐದನೇ ದಿನದಾಟವು ನಡೆಯುತ್ತಿರುವುದರಿಂದ ಈ ಮ್ಯಾಚ್ ಡ್ರಾನಲ್ಲಿ ಕೊನೆಗೊಳ್ಳುವುದು ಖಚಿತ. ಹೀಗಾಗಿ ಮೊದಲ ಇನಿಂಗ್ಸ್ ಆಧಾರದ ಮೇಲೆ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ತಂಡವು ರಣಜಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.