ವಿಜಯಪುರ : ವಿಜಯಪುರ ಘನಘೋರ ದುರಂತ ಸಂಭವಿಸಿದ್ದು, ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಕೂಡ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಮನಕಲಕುವ ಘಟನೆ ಸಂಭವಿಸಿದೆ.ಮಿರಗಿ ಗ್ರಾಮದ ನಿವಾಸಿ ರಾಜಶ್ರೀ ಶಂಕರ ಹಳ್ಳೂರ (31) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.. ಇವರು ತಮ್ಮ ಮಕ್ಕಳಾದ ತನುಶ್ರೀ (7 ವರ್ಷ), ಅನುಶ್ರೀ (5 ವರ್ಷ) ಹಾಗೂ ಕೇವಲ 10 ತಿಂಗಳ ಹಸುಗೂಸು ಸಂತೋಷನ್ನು ಬಾವಿಗೆ ಎಸೆದು ಕ್ರೂರ ಅಂತ್ಯ ಕಂಡಿದ್ದಾರೆ.
ರಾಜಶ್ರೀ ಪತಿ ಶಂಕರ್ ಅವರು ಖಾಸಗಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಘಟನೆ ನಡೆದ ಸಮಯದಲ್ಲಿ ಅವರು ಊರಿನಲ್ಲಿ ಇರಲಿಲ್ಲ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾಜಶ್ರೀ ಈ ತೀವ್ರ ನಿರ್ಧಾರ ತೆಗೆದುಕೊಂಡಿದ್ದಾರೆ. ತಕ್ಷಣವೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಇಂಡಿ ಗ್ರಾಮೀಣ ಪೊಲೀಸರು, ಪರಿಶೀಲನೆ ನಡೆಸಿದಾಗ ತಾಯಿ ಮತ್ತು ಮೂವರು ಮಕ್ಕಳ ಸಾವಿನ ಸುದ್ದಿ ದೃಢಪಟ್ಟಿದೆ. ಸದ್ಯ ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಕೆ ಮುಂದುವರಿದಿದೆ.