ರಾಯಚೂರು ಜಿಲ್ಲೆಯಲ್ಲಿ ಮದುವೆ ಬ್ರೋಕರ್ ಹೆಸರಲ್ಲಿ ಜನರನ್ನು ನಂಬಿಸಿ ಬೈಕ್ ಮತ್ತು ಹಣ ಕಸಿದುಕೊಳ್ಳುತ್ತಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಕವಿತಾಳ ಪೊಲೀಸರ ಕಾರ್ಯಾಚರಣೆಯಲ್ಲಿ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ದೊಡ್ಡಬಸವ ಎಂಬ ಆರೋಪಿ ಬಂಧನಕ್ಕೊಳಗಾಗಿದ್ದಾನೆ.ಆರೋಪಿ ಮದುವೆಗೆ ಹೆಣ್ಣು ತೋರಿಸುವುದಾಗಿ ಕರೆದು, ಬರುವವರನ್ನು ಬೆದರಿಸಿ ಚಾಕು ತೋರಿಸಿ ಅವರ ಬೈಕ್ಗಳನ್ನು ಕಸಿದುಕೊಳ್ಳುತ್ತಿದ್ದ. ಬಳಿಕ ಹಣದೊಂದಿಗೆ ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಶರಣಪ್ಪ ಎಂಬುವವರ ದೂರು ಆಧಾರವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಸ್ನೇಹಿತ ಈಶಪ್ಪ ಜೊತೆ ಕನ್ಯಾ ನೋಡಲು ಬಂದಿದ್ದ ಶರಣಪ್ಪನಿಗೆ ಆರೋಪಿ ಚಾಕು ತೋರಿಸಿ ಬೈಕ್ ಕಿತ್ತುಕೊಂಡಿದ್ದಾನೆ ಎಂಬ ಆರೋಪವಿದೆ.ಪೊಲೀಸರ ತನಿಖೆಯಲ್ಲಿ ಆರೋಪಿ 8.40 ಲಕ್ಷ ರೂ. ಮೌಲ್ಯದ 14 ಬೈಕ್ಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ. ಬಳ್ಳಾರಿ, ಸಿರಗುಪ್ಪ, ಗಂಗಾವತಿ, ಮಾನ್ವಿ ಸೇರಿದಂತೆ ಹಲವು ಕಡೆಗಳಲ್ಲಿ ಈ ರೀತಿಯ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.ಆರೋಪಿಯ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಎಲ್ಲಾ ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ. ಬಳಿಕ ದೊಡ್ಡಬಸವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.