ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನೋರ್ವ 19 ವರ್ಷದ ಯುವಕನಿಗೆ ಚಾಕು ಇರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ 16 ವರ್ಷದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಯುವಕನನ್ನು ರಾಹುಲ್ ಬಾಹುಬಲಿ ಸಪ್ತಸಾಗರ (19) ಎಂದು ಗುರುತಿಸಲಾಗಿದೆ. ಮೃತ ಯುವಕ ಸೆಕೆಂಡ್ ಇಯರ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದರು. ಆರೋಪಿ ಹಾಗೂ ಮೃತ ರಾಹುಲ್ ಪರಸ್ಪರ ಪರಿಚಿತರಾಗಿದ್ದರು ಎನ್ನಲಾಗಿದೆ. ಹೋಳಿ ಹಬ್ಬದಂದು ಇಬ್ಬರ ನಡುವೆ ಜಗಳ ನಡೆದಿತ್ತು. ಆ ವೇಳೆ ರಾಹುಲ್ ಗೆ ನಾನೇ ಹೊಡೆದು ಕಳುಹಿಸಿದ್ದೇನೆ ಎಂದು ಹೇಳಿಕೊಂಡಿದ್ದ.. ಅಲ್ಲದೇ ಇಡೀ ಊರಿನಲ್ಲಿ ನಾನೇ ರಾಹುಲ್ ಗೆ ಹೊಡೆದಿರೋದು ಎಂದು ಹೇಳಿಕೊಂಡು ಸುತ್ತಾಡುತ್ತಾ ಇದ್ದ.
ಈ ವಿಚಾರ ತಿಳಿದ ರಾಹುಲ್ ಆರೋಪಿಯನ್ನು ಈ ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಲು ತೇರದಾಳ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಬಳಿ ಸೋಮವಾರ ರಾತ್ರಿ ಮಾತನಾಡಲು ಕರೆದಿದ್ದ. ಈ ವೇಳೆ ಇಬ್ಬರ ನಡುವೆ ಮತ್ತೆ ವಾಗ್ವಾದ ಉಂಟಾಗಿ ಗಲಾಟೆ ತೀವ್ರಗೊಂಡಿದೆ.
ಸ್ಥಳದಲ್ಲಿದ್ದ ಇತರ ಸ್ನೇಹಿತರು ಇಬ್ಬರನ್ನು ಬೇರ್ಪಡಿಸಲು ಪ್ರಯತ್ನಿಸಿದರೂ ಅದು ಫಲಿಸಿಲ್ಲ. ಈ ವೇಳೆ ಆರೋಪಿ ತನ್ನ ಬೈಕ್ ಕೀ ಚೈನ್ಗೆ ಕಟ್ಟಿದ್ದ ಚಾಕುವಿನಿಂದ ರಾಹುಲ್ ಕುತ್ತಿಗೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಹುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಇದನ್ನೂ ಗಮನಿಸಿದ ಆರೋಪಿ ಹಾಗೂ ಆತನ ಸ್ನೇಹಿತರು ಸ್ಥಳದಿಂದ ಎಸ್ಕೆಪ್ ಆಗಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.