2026-03-07 07:32:59

4 by 4 To Be Screened At 17th Bangalore International Film Festival | 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ʼ4 ಬೈ 4ʼ ಚಿತ್ರ ಪ್ರದರ್ಶನ | Speed News Kannada

4 by 4 To Be Screened At 17th Bangalore International Film Festival | 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ʼ4 ಬೈ 4ʼ ಚಿತ್ರ ಪ್ರದರ್ಶನ | Speed News Kannada

ನಾಲ್ವರು ನಿರ್ದೇಶಕಿಯರು ನಿರ್ದೇಶಿಸಿರುವ ಮಹಿಳಾ ಪ್ರಧಾನ ಚಿತ್ರ   

ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರ ʼಸ್ತ್ರೀ ಎಂದರೆ ಅಷ್ಟೇ ಸಾಕೆʼ ಎಂಬ ವಾಕ್ಯದೊಂದಿಗೆ ನಡೆಸಲಾಗುತ್ತಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಹಿಳೆಯರೆ ನಿರ್ದೇಶಿಸಿರುವ, ನಿರ್ಮಾಣ ಮಾಡಿರುವ  ಹಾಗೂ ಬಹುತೇಕ ಮಹಿಳೆಯರೇ ನಟಿಸಿರುವ ʼ4 ಬೈ 4ʼ ಚಿತ್ರ ಪ್ರದರ್ಶನವಾಗಿದೆ. ಚಿತ್ರಕ್ಕೆ  ಚಿತ್ರೋತ್ಸವದಲ್ಲಿ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ‌. ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ʼ4 ಬೈ 4ʼ ಮಹಿಳಾ ತಂಡದ ಅಂಥಾಲಾಜಿ ಚಿತ್ರ. ಪ್ರೀತಿ, ವಿಯೋಗ, ಕನಸು, ಧೈರ್ಯ ಹಾಗೂ ಆತ್ಮ ಪರಿವರ್ತನೆಯ ಮೂಲಕ ಮಹಿಳೆಯರ ಆಂತರಿಕ ಲೋಕವನ್ನು ಅನಾವರಣಗೊಳಿಸುವ ನಮ್ಮ ಚಿತ್ರದ ನಾಲ್ಕು ಕಥೆಗಳು ತ್ಯಾಗಮೂಲದ ಸ್ವ- ಅನ್ವೇಷಣೆ ಹಾಗೂ ಧೃಡ ನಿರ್ಧಾರಗಳವರೆಗೆ ಜೀವನದ ವಿಭಿನ್ನ ಅನುಭವಗಳನ್ನು ದಿಟ್ಟವಾಗಿ ಚಿತ್ರಿಸುತ್ತದೆ‌. 

ಈ ಚಿತ್ರದಲ್ಲಿ ಸುಧಾರಾಣಿ, ರಂಜನಿ ರಾಘವನ್, ಲಕ್ಷ್ಮೀ ಗೋಪಾಲಸ್ವಾಮಿ, ಇತಿ ಆಚಾರ್ಯ, ರಾಜೇಶ್ ನಟರಂಗ, ಗ್ರೀಷ್ಮ ಶ್ರೀಧರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮನೋಹರ್ ಜೋಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪ್ತಿ ನವರತ್ನ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಒಂದೊಂದು ಕಥೆಯನ್ನು ತೃಪ್ತಿ ಕುಲಕರ್ಣಿ, ಮೇಘನಾ ಜಗನ್ನಾಥ್, ಚಿತ್ರ ಪರಮೇಶ್ವರನ್ ಹಾಗೂ ಪೂಜಿತ ಪ್ರಸಾದ್ ನಿರ್ದೇಶಿಸಿದ್ದಾರೆ.

ಬೆಂಗಳೂರು ಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಿರುವುದಕ್ಕೆ ಸಂತೋಷವಾಗಿದೆ ಎಂದು ಮಾತನಾಡಿದ ನಟಿ ಸುಧಾರಾಣಿ, ʼನನಗೆ ತಿಳಿದ ಹಾಗೆ ಕನ್ನಡದಲ್ಲಿ ನಾಲ್ಕು ನಿರ್ದೇಶಕಿಯರು ಸೇರಿ ಚಿತ್ರ ನಿರ್ದೇಶನ ಮಾಡಿರುವುದು ಇದೇ ಮೊದಲು. ನಾನು ಅಭಿನಯಿಸಿರುವ ಕಥೆಯ ಹೆಸರು ʼವಿಭಾʼ. ನಿರ್ದೇಶನ, ಸಂಗೀತ ನಿರ್ದೇಶನ, ನಿರ್ಮಾಣ ಹೀಗೆ ಚಿತ್ರದ ಹಲವು ಭಾಗಗಳಲ್ಲಿ ಮಹಿಳೆಯರೆ ಭಾಗಿಯಾಗಿರುವುದು ಬಹಳ ಖುಷಿಯಾಗಿದೆʼ ಎಂದರು.

ನಿರ್ಮಾಪಕಿ ದೀಪ್ತಿ ಮೂರ್ತಿ ಅಯ್ಯರ್, ಕಲಾವಿದೆಯರಾದ ರಂಜನಿ ರಾಘವನ್, ಗ್ರೀಷ್ಮ ಶ್ರೀಧರ್, ನಮಿತಾ ದೇಸಾಯಿ, ದಿವ್ಯಶ್ರೀ, ಅಂಕಿತಾ ಜಯರಾಮ್, ಸಂಗೀತ ನಿರ್ದೇಶಕಿ ದೀಪ್ತಿ ನವರತ್ನ ಹಾಗೂ ಕಾರ್ಯಕಾರಿ ನಿರ್ಮಾಪಕಿಯರಾದ ಮಾಲತಿ ಮೂರ್ತಿ, ಸುಮನಾ ವಿಶ್ವನಾಥ್, ಪ್ರೀತಿ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.