ಹೈದರಾಬಾದ್: ರಾಜ್ಯದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಲುಆಂಧ್ರಪ್ರದೇಶ ಸರ್ಕಾರ ಒಂದಿಲ್ಲೊಂದು ಆಮಿಷವನ್ನು ಒಡ್ಡುತ್ತಲೇ ಇದೆ. ಮೂರನೇ ಮಗುವಿನ ಜನಿಸಿದರೆ ರೂ.30,000 ಮತ್ತು ನಾಲ್ಕನೇ ಮಗು ಜನಿಸಿದರೆ ರೂ.40,000 ಪ್ರೋತ್ಸಾಹ ಧನ ನೀಡುವುದಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶನಿವಾರ ಘೋಷಿಸಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ಸ್ವರ್ಣ ಆಂಧ್ರ –ಸ್ವಚ್ಛ ಆಂಧ್ರ ಅಭಿಯಾನದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಮುಂದಿನ ಒಂದು ತಿಂಗಳೊಳಗೆ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಹಿಂದೆ ಅವರು ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪ್ರತಿಪಾದಿಸಿದ್ದರು. ಆದರೆ ಈಗ ಜನನ ಪ್ರಮಾಣವನ್ನು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡುವ ಸಮಯ ಈಗ ಬಂದಿದೆ ಎಂದು ಹೇಳಿದ್ದಾರೆ. ಈ ಹಿಂದೆ ಎರಡನೇ ಮಗು ಜನಿಸಿದರೆ ರೂ.25,000 ಪ್ರೋತ್ಸಾಹ ಧನ ನೀಡುವುದಾಗಿ ಮಾರ್ಚ್ 5 ರಂದು ವಿಧಾನಸಭೆಯಲ್ಲಿ ಘೋಷಿಸಿದ್ದರು.
ಕೆಲವು ದಂಪತಿ ಒಂದೇ ಮಗುವನ್ನು ಪಡೆಯುತ್ತಿದ್ದಾರೆ. ಮತ್ತೆ ಕೆಲವರು ಮೊದಲನೇ ಮಗು ಗಂಡಾಗದಿದ್ದರೆ ಮಾತ್ರ ಎರಡನೇ ಮಗುವಿಗೆ ಚಿಂತಿಸುತ್ತಿದ್ದಾರೆ ಎಂದೂ ನಾಯ್ಡು ಹೇಳಿದ್ದಾರೆ.