ಜೈಪುರ: ಕಾಂಗ್ರೆಸ್ ವರಿಷ್ಠ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ 25 ಸಂಸದರನ್ನು ಗುಂಡಿಟ್ಟು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಬಲಪಂಥೀಯ ಗುಂಪಿನ ಕರ್ಣಿ ಸೇನಾ ವಕ್ತಾರ ರಾಜ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ವಿಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ಆರ್ಎಸ್ಎಸ್–ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಆರೋಪದ ಮೇಲೆ ರಾಜ್ ಸಿಂಗ್ ನನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಲಾಗಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ನಿಂದಿಸಿದ ಕಾಂಗ್ರೆಸ್ನ 25 ಸಂಸದರನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ನಾವು ಅವರ ಮನೆಗೆ ನುಗ್ಗಿ ಒಬ್ಬೊಬ್ಬರನ್ನೇ ಗುಂಡಿಕ್ಕಿ ಕೊಲ್ಲುತ್ತೇವೆ. ರಾಹುಲ್ ಗಾಂಧಿ ನೀವೂ ಕೂಡ ಎಚ್ಚರದಿಂದ ಕೇಳಿಸಿಕೊಳ್ಳಿ, ನಿಮ್ಮ ಮನೆಗೂ ನುಗ್ಗಿ, ಗುಂಡಿಕ್ಕುತ್ತೇವೆ ಎಂದು ರಾಜ್ ಸಿಂಗ್ ವಿಡಿಯೊದಲ್ಲಿ ಬೆದರಿಕೆ ಒಡ್ಡಿದ್ದರು.
ಬೊರ್ಖೇಡಾ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಈತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್ ತಿಳಿಸಿದ್ದಾರೆ. ರಾಜ್ ಸಿಂಗ್ ವಿರುದ್ಧ ಈಗಾಗಲೇ ನಾಲ್ಕು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.