ಸ್ಯಾಂಡಲ್ವುಡ್ನ ಅತಿಹೆಚ್ಚು ಬೇಡಿಕೆಯ ನಟ, ಅಭಿಮಾನಿಗಳ ಪಾಲಿನ ಡಿ ಬಾಸ್ ಜೈಲು ಪಾಲಾಗಿ ಇಂದಿಗೆ ಭರ್ತಿ ಒಂದು ವರ್ಷ ಸಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್, ಕಾನೂನು ಸಂಕೋಲೆಯಿಂದ ಹೊರಬರಲು ನಡೆಸುತ್ತಿರುವ ಹೋರಾಟ ಇನ್ನೂ ಫಲ ನೀಡಿಲ್ಲ. 2024 ಜೂನ್ 11 ರಂದು ಮೈಸೂರಿನಲ್ಲಿ ಮೊದಲ ಬಾರಿ ಬಂಧನಕ್ಕೊಳಗಾಗಿದ್ದ ದರ್ಶನ್, ಆರಂಭದಲ್ಲಿ 131 ದಿನಗಳ ಕಾಲ ಜೈಲಿನಲ್ಲಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದರೂ, ಪೊಲೀಸರು ಸುಪ್ರೀಂ ಕೋರ್ಟ್ನಲ್ಲಿ ನಡೆಸಿದ ಕಾನೂನು ಸಮರದಿಂದಾಗಿ ಅವರ ಜಾಮೀನು ರದ್ದಾಗಿತ್ತು. ಇದರ ಪರಿಣಾಮವಾಗಿ 2025 ಆಗಸ್ಟ್ 14 ರಂದು ಎರಡನೇ ಬಾರಿಗೆ ಬಂಧನಕ್ಕೊಳಗಾದ ನಟ, ಅಂದಿನಿಂದ ಇಂದಿನವರೆಗೆ ಪರಪ್ಪನ ಅಗ್ರಹಾರದಲ್ಲೇ ಕಾಲ ಕಳೆಯುತ್ತಿದ್ದಾರೆ.
ದರ್ಶನ್ ಜೈಲಿನಲ್ಲಿದ್ದಾಗಲೇ ಬಹುನಿರೀಕ್ಷಿತ 'ಡೆವಿಲ್' ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಂಡಿದೆ. ಆದರೆ ತನ್ನ ನೆಚ್ಚಿನ 'ಸೆಲೆಬ್ರಿಟಿಗಳು' ಚಿತ್ರಮಂದಿರದಲ್ಲಿ ಸಂಭ್ರಮಿಸುವುದನ್ನು ನೋಡಲು ದರ್ಶನ್ ಅವರಿಗೆ ಸಾಧ್ಯವಾಗಲಿಲ್ಲ. ಸಿನಿಮಾ ತೆರೆಕಂಡು ಮಾಯವಾದರೂ ದರ್ಶನ್ ಮಾತ್ರ ಇಂದಿಗೂ ಕಂಬಿ ಹಿಂದೆಯೇ ಇದ್ದಾರೆ. ಗೆಳತಿಗಾಗಿ ಮಾಡಿದ ಒಂದು ತಪ್ಪು ದರ್ಶನ್ ಅವರ ಸುಂದರ ಭವಿಷ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ. ಸದ್ಯ ದರ್ಶನ್ ಕುಟುಂಬದವರು ಕಾನೂನು ಹೋರಾಟದ ಜೊತೆಗೆ ದೇವಸ್ಥಾನಗಳಿಗೆ ಅಲೆದು ದೈವದ ಮೊರೆ ಹೋಗುತ್ತಿದ್ದಾರೆ.
ಇತ್ತ ಅಭಿಮಾನಿಗಳು ಮಾತ್ರ "ನಮ್ಮ ಬಾಸ್ ಎಲ್ಲಿದ್ದರೂ ಬಾಸ್, ಅವರು ಶೀಘ್ರವೇ ಹೊರಬಂದು ಮತ್ತೆ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆಯಲಿದ್ದಾರೆ" ಎಂಬ ಅಚಲ ವಿಶ್ವಾಸದಲ್ಲಿದ್ದಾರೆ. ಒಟ್ಟಿನಲ್ಲಿ ಒಂದು ವರ್ಷದ ಜೈಲು ವಾಸ ಮುಗಿಸಿರುವ ದರ್ಶನ್ ಅವರಿಗೆ ಮುಂದಿನ ದಿನಗಳಲ್ಲಾದರೂ ಜಾಮೀನು ಸಿಗಲಿದೆಯೇ? ಅಥವಾ ಕಾನೂನಿನ ಶಿಕ್ಷೆ ಮುಂದುವರಿಯಲಿದೆಯೇ ಎಂಬುದು ಇಡೀ ಚಿತ್ರರಂಗದ ಕುತೂಹಲಕ್ಕೆ ಕಾರಣವಾಗಿದೆ.