ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಏಪ್ರಿಲ್ 23ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆ, ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಮಹತ್ವದ ಘೋಷಣೆ ಮಾಡಿದ್ದಾರೆ. ವಿಜಯ್ ಅವರು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಚೆನ್ನೈನ ಪೆರಂಬೂರು ಹಾಗೂ ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಜೊತೆಗೆ, ತಮ್ಮ ಪಕ್ಷದ ಎಲ್ಲಾ 234 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಪ್ರಮುಖ ಅಭ್ಯರ್ಥಿಗಳಲ್ಲಿ ಟಿ ನಗರದಿಂದ ಎನ್ ಆನಂದ್, ಮೈಲಾಪುರದಿಂದ ವೆಂಕಟ್ ರಾಮನ್, ವಿಲ್ಲಿವಕ್ಕಂನಿಂದ ಆಧವ್ ಅರ್ಜುನ, ಗೋಬಿಚೆಟ್ಟಿಪಾಳ್ಯಂನಿಂದ ಕೆಎ ಸೆಂಗ್ಕೊಟ್ಟೈಯನ್ ಸೇರಿದಂತೆ ಹಲವರ ಹೆಸರುಗಳಿವೆ. ಇದೊಂದಿಗೇ, ವಿಜಯ್ ಅವರು ಈ ಚುನಾವಣೆ ನೇರ ಹೋರಾಟವಾಗಿದ್ದು, ತಮ್ಮ ಪಕ್ಷ ಮತ್ತು ಎಂ, ಕೆ ಸ್ಟಾಲಿನ್ ನೇತೃತ್ವದ ಮೈತ್ರಿಕೂಟದ ನಡುವೆ ನಡೆಯಲಿದೆ ಎಂದು ಹೇಳಿದ್ದಾರೆ. ಈ ಬಾರಿ ಟಿವಿಕೆ ಪಕ್ಷದ ಭರವಸೆಗಳೂ ಭಾರೀ ಗಮನ ಸೆಳೆದಿವೆ. 29 ವರ್ಷ ಮೇಲ್ಪಟ್ಟ ನಿರುದ್ಯೋಗಿಗಳಿಗೆ ತಿಂಗಳಿಗೆ 4,000 ರೂಪಾಯಿ ನೆರವು, ಡಿಪ್ಲೊಮಾ ಹೊಂದಿರುವವರಿಗೆ 2,500 ರೂಪಾಯಿ ಸಹಾಯ ಘೋಷಿಸಲಾಗಿದೆ. ಜೊತೆಗೆ, 12ನೇ ತರಗತಿಯಿಂದ ಪಿಎಚ್ಡಿ ವರೆಗೆ 20 ಲಕ್ಷ ರೂಪಾಯಿ ಸಾಲ ಖಾತರಿಯನ್ನು ನೀಡುವುದಾಗಿ ಹೇಳಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ, ಮಹಿಳೆಯರ ಸುರಕ್ಷತೆ, ಮಾದಕವಸ್ತು ಮುಕ್ತ ತಮಿಳುನಾಡು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿ ವಿಜಯ್ ಭರವಸೆ ನೀಡಿದ್ದಾರೆ.