ಚೆನ್ನೈ: ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಥಾನ ಹೊಂದಾಣಿಕೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರೊಂದಿಗೆ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಮತ್ತು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಮಹತ್ವದ ಮಾತುಕತೆ ನಡೆಸಿದ್ದಾರೆ.
ಕಳೆದ ಹಲವು ದಿನಗಳಿಂದ ಸೀಟು ಹಂಚಿಕೆ ಸಂಬಂಧ ಡಿಎಂಕೆ–ಕಾಂಗ್ರೆಸ್ ನಡುವೆ ಬಿಕ್ಕಟ್ಟು ಉಂಟಾಗಿತ್ತು.
ಸುಮಾರು ಒಂದು ಗಂಟೆ ನಡೆದ ಮಹತ್ವದ ಸಭೆಯಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚೆ ನಡೆದಿದೆ. ಆದರೂ ಇಂದು ಅಂತಿಮ ನಿರ್ಧಾರ ಕೈಗೊಂಡಿಲ್ಲ. ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಒಂದು ವೇಳೆ ಮೈತ್ರಿ ವಿಫಲವಾದರೆ ಉಂಟಾಗಬಹುದಾದ ಪರಿಣಾಮಗಳನ್ನು ಕುರಿತೂ ಸ್ಟಾಲಿನ್ ಅವರೊಂದಿಗೆ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ.
ಆರಂಭದಲ್ಲಿ ಒಂದು ರಾಜ್ಯಸಭಾ ಸ್ಥಾನ ಮತ್ತು 40 ವಿಧಾನಸಭಾ ಸ್ಥಾನ ಬಿಟ್ಟುಕೊಡಬೇಕು ಎಂಬ ಕಾಂಗ್ರೆಸ್ ನಾಯಕರ ಬೇಡಿಕೆಗೆ ಡಿಎಂಕೆ ನಾಯಕರು ಒಪ್ಪಿರಲಿಲ್ಲ. ಆದರೆ ಈಗ ಎರಡು ರಾಜ್ಯಸಭಾ ಸ್ಥಾನ ಮತ್ತು 28 ವಿಧಾನಸಭಾ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ನೇತೃತ್ವದ ಸೀಟು ಹಂಚಿಕೆ ಸಮಿತಿಯು ಡಿಎಂಕೆಯ ಟಿ.ಆರ್.ಬಾಲು ನೇತೃತ್ವದ ಸಮಿತಿಗೆ ತಾನು ಬಯಸಿರುವ ಸ್ಥಾನಗಳ ಪಟ್ಟಿ ನೀಡಿತ್ತು. ಆದರೆ ಈ ಪಟ್ಟಿಯನ್ನು ಡಿಎಂಕೆ ಒಪಿರಲಿಲ್ಲ.
ಡಿಎಂಕೆ ಮೈತ್ರಿ ಮುಂದುವರಿಸಬೇಕೆಂದು ಬಯಸುತ್ತಿದೆ. ಈ ಕುರಿತು ಮಾತುಕತೆ ಮುಂದುವರೆದಿದೆ. ನಮ್ಮ ನಾಯಕರು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಡಿಎಂಕೆ ವಕ್ತಾರ ಎಳಂಗೋವನ್ ತಿಳಿಸಿದ್ದಾರೆ.