ಹಾಸನ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಐತಿಹಾಸಿಕ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು, 40 ವರ್ಷ ವಯಸ್ಸಾದರೂ ಮದುವೆ ಮಾಡಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಗನೊಬ್ಬ ತನ್ನ ಹೆತ್ತ ತಾಯಿಯನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಗಂಗಮ್ಮ (65) ಎಂದು ಗುರುತಿಸಲಾಗಿದೆ. ಆರೋಪಿ ಪುತ್ರ ಉಮಾಶಂಕರ್ ಗೆ 40 ವರ್ಷ ವಯಸ್ಸಾಗಿದ್ದರೂ ಕೂಡ ಮದುವೆ ಮಾಡಿಲ್ಲ ಎಂಬ ಕಾರಣಕ್ಕೆ ತಾಯಿ ಮತ್ತು ಮಗನ ನಡುವೆ ಸದಾ ಗಲಾಟೆಯಾಗುತ್ತಲೆ ಇತ್ತು. ಆರೋಪಿ ಉಮಾಶಂಕರ್ ಕಳೆದ ಒಂದು ವರ್ಷದ ಹಿಂದೆ ಕುಂಭಮೇಳಕ್ಕೆ ತೆರಳಿ ವಾಪಸ್ ಬರುವಾಗ ಅಪಘಾತಕ್ಕೀಡಾಗಿದ್ದ. ಈ ವೇಳೆ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಅಂದಿನಿಂದ ಆತ ಒಮ್ಮೊಮ್ಮೆ ಬುದ್ಧಿ ಭ್ರಮಣೆಯಾದವನಂತೆ ವಿಚಿತ್ರವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ತನಗೆ ಮದುವೆ ಮಾಡಿಸುವಂತೆ ತಾಯಿ ಗಂಗಮ್ಮ ಅವರ ಜೊತೆ ಪದೇ ಪದೇ ಜಗಳವಾಡುತ್ತಿದ್ದನು. ಮಾರ್ಚ್ 26ರಂದು ಕೂಡ ಮದುವೆ ವಿಚಾರವಾಗಿ ತಾಯಿ-ಮಗನ ನಡುವೆ ಮಾತಿಗೆ ಮಾತು ಬೆಳೆದಿದೆ. ಮದುವೆ ವಿಚಾರವಾಗಿ ಮಾತಿಗೆ ಮಾತು ಬೆಳೆದು ತೀವ್ರವಾಗಿ ಸಿಟ್ಟಿನಲ್ಲಿ ಆರೋಪಿ ಉಮಾಶಂಕರ್ ಮೊದಲು ಕೈನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪೆಟ್ಟು ಬೀಳುತ್ತಿದ್ದಂತೆ ಗಂಗಮ್ಮ ಕೆಳಗೆ ಕುಸಿದು ಬಿದ್ದಿದ್ದಾರೆ. ಇದನ್ನೂ ನೋಡಿದ ಮೇಲೆ ಕೂಡ ಕ್ರೂರವಾಗಿ ವರ್ತಿಸಿದ ಮಗ ಅವರ ತಲೆ ಮೇಲೆ ಕಲ್ಲನ್ನು ಎತ್ತಿ ಹಾಕಿದ್ದಾನೆ. ಕಲ್ಲಿನಿಂದ ಜಜ್ಜಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದ ಗಂಗಮ್ಮ ಅವರನ್ನು ತಕ್ಷಣವೇ ಆಸ್ಪತ್ರೆಯ ಐಸಿಯು ವಿಭಾಗಕ್ಕೆ ದಾಖಲಿಸಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಾಲ್ಕು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಗಂಗಮ್ಮ, ಮಾರ್ಚ್ 30ರ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಶ್ರವಣಬೆಳಗೊಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗನ ಈ ಪೈಶಾಚಿಕ ಕೃತ್ಯದಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.