ಇರಾನ್- ಇಸ್ರೇಲ್ ನಡುವೆ ಯಾವಾಗ ಯುದ್ಧ ಶುರುವಾಯ್ತೋ ಅಲ್ಲಿಂದ ಸಮಸ್ಯೆಗಳ ಸರಮಾಲೆ ಶುರುವಾಗಿದೆ. ಇಡೀ ವಿಶ್ವಕ್ಕೆ ತೈಲ ಹಾಗೂ ಗ್ಯಾಸ್ ಸಮಸ್ಯೆ ಬಂದೊದಗಿದೆ. ಕರ್ನಾಟಕದಲ್ಲಂತೂ ಹೇಳಂಗಿಲ್ಲ.. ಆ ರೇಂಜ್ಗೆ ಕಚ್ಚಾತೈಲ, ಗ್ಯಾಸ್ ಸಮಸ್ಯೆ ಮಿತಿ ಮೀರಿದೆ.
ಇರಾನ್ ಜೊತೆಗಿನ ಭಾರತದ ರಾಜತಾಂತ್ರಿಕತೆಯಿಂದಾಗಿ ಭಾರತಕ್ಕೆ ಹೊರ್ಮುಜ್ ಜಲಸಂಧಿ ಮೂಲಕ ಗ್ಯಾಸ್ ಹಾಗೂ ಕಚ್ಚಾತೈಲ ಹೊತ್ತ ಹಡಗುಗಳು ಬರ್ತಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ 47,600 ಮೆಟ್ರಿಕ್ ಟನ್ ಎಲ್ಪಿಜಿಯನ್ನು ಹೊತ್ತ `ಜಗ್ ವಸಂತ್’ ಹಡಗು ಗುಜರಾತ್ನ ವಾಡಿನಾರ್ ಬಂದರಿಗೆ ಬಂದಿದೆ.
ಸುಮಾರು 1 ತಿಂಗಳ ಕಾಲ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ಹಡಗುಗಳ ಪೈಕಿ ಇದು ಒಂದು. ಇದೀಗ ಗುಜರಾತ್ನ ವಾಡಿನಾರ್ ಬಂದರಿಗೆ ಆಗಮಿಸಿದ್ದು, ಗುರುವಾರ (ಮಾ.26) ತಡರಾತ್ರಿ 47,600 ಮೆಟ್ರಿಕ್ ಟನ್ ಎಲ್ಪಿಜಿಯನ್ನು ಹೊತ್ತುತಂದಿದೆ. ಈ ಮೂಲಕ ದೇಶದಲ್ಲಿ ಉಂಟಾಗುತ್ತಿರುವ ಅನಿಲ ಪೂರೈಕೆ ಒತ್ತಡ ಕಡಿಮೆಯಾಗಲಿದೆ. ಇನ್ನೂ 45,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ 2ನೇ ಎಲ್ಪಿಜಿ ಟ್ಯಾಂಕರ್ ಪೈನ್ ಗ್ಯಾಸ್ ಶೀಘ್ರದಲ್ಲೇ ನವ ಮಂಗಳೂರು ಬಂದರಿಗೆ ಆಗಮಿಸಲಿದೆ. ಈ ಹಡಗು ಬಂದ ಬಳಿಕ 92,000 ಮೆಟ್ರಿಕ್ ಟನ್ಗಳಿಗಿಂತ ಅಧಿಕ ಎಲ್ಪಿಜಿ ಸಂಗ್ರಹವಾಗಲಿದೆ. ಇದು ಸರಿಸುಮಾರು ದೇಶದ ಜನರಿಗೆ ಒಂದು ದಿನದ ಅಡಿಗೆ ಅನಿಲ ಬಳಕೆಗೆ ಸಮನಾಗಿದೆ.
ಕಳೆದ ಹತ್ತು ದಿನಗಳಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋದ ಎರಡು ದೊಡ್ಡ ಎಲ್ಪಿಜಿ ಟ್ಯಾಂಕರ್ಗಳು ಈಗಾಗಲೇ ಭಾರತಕ್ಕೆ ಬಂದಿವೆ. ಜಗ್ ವಸಂತ್ಗಿಂತ ಮೊದಲು, ಎಲ್ಪಿಜಿ ಟ್ಯಾಂಕರ್ಗಳಾದ ಶಿವಾಲಿಕ್ ಮತ್ತು ನಂದಾ ದೇವಿ ಕಾಂಡ್ಲಾ ಬಂದರಿಗೆ ಆಗಮಿಸಿವೆ. ಇದಲ್ಲದೇ, ಎಲ್ಪಿಜಿ ಟ್ಯಾಂಕರ್ ಅಪೊಲೋ ಓಷನ್ ಹಡಗು ನವಮಂಗಳೂರು ಬಂದರಿಗೆ ಬಂದಿದ್ದು, 16,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತು ತಂದಿದೆ.