ಚಿಕ್ಕಬಳ್ಳಾಪುರ: ಕಾರು-ಲಾರಿ ಡಿಕ್ಕಿಯಾದ ಪರಿಣಾಮ ನವವಿವಾಹಿತೆ ಹಾಗೂ ಸಂಬಂಧಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಶೆಟ್ಟಿಗೆರೆ ಕ್ರಾಸ್ ಬಳಿ ನಡೆದಿದೆ. ಪತಿ ಸ್ಥಿತಿ ಗಂಭೀರ ಮಾಹಿತಿಗಳ ಪ್ರಕಾರ, ಈ ಅಪಘಾತದಲ್ಲಿ ಪತಿ ಸ್ಥಿತಿ ಗಂಭೀರವಾಗಿದೆ. ಇನ್ನು ಮೃತ ನವವಿವಾಹಿತೆಯನ್ನ 23 ವರ್ಷದ ರಕ್ಷಿತಾ ರೆಡ್ಡಿ ಹಾಗೂ ಸಂಬಂಧಿಯನ್ನ 30 ವರ್ಷದ ಪವನ್ ರೆಡ್ಡಿ ಗುರುತಿಸಲಾಗಿದೆ. ಇನ್ನು ರಕ್ಷಿತಾ ಪತಿ ರಾಜಶೇಖರ್ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು, ರಕ್ಷಿತಾ ಹಾಗೂ ರಾಜಶೇಖರ್ ದಂಪತಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ನಲ್ಲಿ ಮದುವೆ ಆಗಿದ್ದ ರಕ್ಷಿತಾ ರಕ್ಷಿತಾ ಹಾಗೂ ರಾಜಶೇಖರ್ ಕಳೆದ ನವೆಂಬರ್ ತಿಂಗಳಿನಲ್ಲಿ ಮದುವೆ ಆಗಿದ್ದರು. ಈ ಜೋಡಿ ತಮ್ಮ ಸಂಬಂಧಿ ಪವನ್ ರೆಡ್ಡಿ ಜೊತೆಗೆ ಅನಂತಪುರದ ಅವರ ಊರಿಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಮುಂದೆ ಹೋಗುತ್ತಿದ್ದ ಕಂಟೇನರ್ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ರಕ್ಷಿತಾ ಹಾಗೂ ಪವರ್ ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಪತಿ ರಾಜಶೇಖರ್ ಅವರನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸೇಬು ಸಾಗಿಸುತ್ತಿದ್ದ ವಾಹನ ಪಲ್ಟಿ - ರಸ್ತೆಪಾಲಾದ ಆಪಲ್ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಘಟನೆ ಬೆಳಗಾವಿ ನಗರದ ಸಮೀಪ ನಡೆದಿದೆ. ಈ ಅಪಘಾತದಿಂದಾಗಿ ವಾಹನದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸೇಬು ಹಣ್ಣುಗಳು ರಸ್ತೆಯಲ್ಲೆಲ್ಲಾ ಹರಡಿ ಹೋಗಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಗೂಡ್ಸ್ ವಾಹನವು ಮುಂಬೈನಿಂದ ದಾವಣಗೆರೆಗೆ ಸೇಬು ಹಣ್ಣಿನ ಬಾಕ್ಸ್ಗಳನ್ನು ಹೊತ್ತು ಸಾಗುತ್ತಿತ್ತು. ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವಾಗ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ವಾಹನವು ರಸ್ತೆಯ ಮಧ್ಯದಲ್ಲೇ ಪಲ್ಟಿಯಾಗಿದೆ. ಸೇಬು ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗುತ್ತಿದ್ದಂತೆ ಬಾಕ್ಸ್ಗಳಲ್ಲಿದ್ದ ಸೇಬು ಹಣ್ಣುಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಗೂಡ್ಸ್ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಕೇವಲ ಸಣ್ಣಪುಟ್ಟ ಗಾಯಗಳಾಗಿವೆ. ಹೆದ್ದಾರಿಯ ಮಧ್ಯದಲ್ಲೇ ವಾಹನ ಪಲ್ಟಿಯಾಗಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ, ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದಾಗಿ ದೂರದ ಪ್ರಯಾಣ ಬೆಳೆಸುತ್ತಿದ್ದ ಸವಾರರು ತೊಂದರೆ ಅನುಭವಿಸಿದರು. ಇನ್ನು ಘಟನೆ ನಡೆದ ತಕ್ಷಣ ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕ್ರೇನ್ ನೆರವಿನಿಂದ ಪಲ್ಟಿಯಾಗಿದ್ದ ವಾಹನವನ್ನು ಪಕ್ಕಕ್ಕೆ ಸರಿಸಿ, ರಸ್ತೆಯಲ್ಲಿದ್ದ ಹಣ್ಣಿನ ಬಾಕ್ಸ್ಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.