ಇಂದಿಗೂ ಸಮಾಜದಲ್ಲಿ ಜಾತಿಯಲ್ಲಿ ಮೇಲು ಕೀಳು ಎಂಬ ಭಾವನೆ ಜೀವಂತವಾಗಿದೆ ಎನ್ನುವುದಕ್ಕೆ ಗದಗ ಜಿಲ್ಲೆಯ ಈ ಘಟನೆ ಸಾಕ್ಷಿಯಾಗಿದೆ. ಹಿಂದೆಯೂ ಜಾತಿ ಅಸ್ಪೃರ್ಷತೆ ವಿಚಾರಕ್ಕೆ ದಲಿತರನ್ನು ನಿಂದಿಸುತ್ತಲೇ ಇದ್ದಾರೆ. ಇದೀಗ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡಟ್ಟಿ ಗ್ರಾಮದಲ್ಲಿ ಎಸ್ಸಿ ಸಮುದಾಯದ ಯುವಕ ಎಸ್ಟಿ ಸಮುದಾಯದ ರೈತನ ಜಮೀನಿನಲ್ಲಿ ನೀರು ಕುಡಿದಿದಕ್ಕೆ ಹಲ್ಲೆ ಮಾಡಿದ್ದಾರೆ.
ಎಸ್ಸಿ ಸಮುದಾಯದ ಯುವಕ ಬಾಯಾರಿಕೆಯಾಗಿ ಎಸ್ಟಿ ಸಮುದಾಯದ ರೈತನ ಜಮೀನಿನ ಬೋರ್ವೆಲ್ನಲ್ಲಿ ನೀರನ್ನು ಕುಡಿದಿದ್ದ. ಇದೇ ವಿಚಾರ ಇಟ್ಟುಕೊಂಡು ಇಬ್ಬರ ನಡುವೆ ವಾಗ್ವದ ತೀವ್ರಗೊಂಡಿದ್ದು, ಎರಡು ಸಮುದಾಯಗಳ ನಡುವೆ ಹೊಡೆದಾಟ ನಡೆದಿದೆ. ಎರಡು ಸಮುದಾಯದವರು ಕೊಡ್ಲಿ, ದೊಣ್ಣೆ ಮತ್ತು ಕಲ್ಲುಗಳಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಇದರಿಂದ ಚಿಕ್ಕವಡಗಟ್ಟಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ದಾಳಿಯಲ್ಲಿ ಎಸ್ಸಿ ಸಮುದಾಯದ ಮಹಿಳೆಯರು ಸೇರಿ ಒಟ್ಟು 24 ಮಂದಿ ಗಾಯಗೊಂಡಿದ್ದು, ಮೂವರ ತಲೆಗೆ ಗಂಭೀರ ಗಾಯಗಳಾಗಿವೆ. ಇನ್ನೂ ಕೆಲವರ ಕೈ-ಕಾಲು ಮುರಿದುಹೋಗಿದೆ. ಸದ್ಯ ಗಾಯಾಳುಗಳು ಗದಗ ಜೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇನ್ನೂ ಈ ಗಲಾಟೆ ಪ್ರಕರಣ ಸಂಬಂಧ ಗದಗ ಎಸ್ಪಿ ರೋಹನ್ ಜಗದೀಶ್ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.