ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಾಡೋದಿಕ್ಕೆ ಬೇರೆ ಏನೂ ಕೆಲಸವಿಲ್ಲ. ಅವರು ಕೇವಲ ಸಚಿವರು ಎಂಬ ಗೌರವ ಬಿಟ್ಟರೆ ಸಮಾಜದಲ್ಲಿ ಬೇರೆ ಏನೂ ಇಲ್ಲ. ಅವರು ದಲಿತರ ಪರ ಹೋರಾಡಿಯೇ ಇಲ್ಲ. ಅವರಲ್ಲಿ ದಲಿತತ್ವ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುತ್ತಾರೆ ಹೊರತು ದಲಿತತ್ವ ಅವರ ಕುಟುಂಬದಲ್ಲಿ ಇಲ್ಲ ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ರಾಜಕಾರಣಿಯೇ ಅಲ್ಲ. ಅಪ್ಪನ ನೆರಳಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಬದ್ಧತೆಯೂ ಇಲ್ಲ. ಅವರ ತಳಬುಡ ಎಲ್ಲಾ ನನಗೆ ಗೊತ್ತಿದೆ . ಅವರ ಅಪ್ಪನ ಹೆಸರು ಜೊತೆಯಲ್ಲಿ ಇಲ್ಲದೇ ಇದ್ದರೆ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಳು ಅರ್ಹರಲ್ಲ ಎಂದರು. ನಾನು ಬಿಜೆಪಿಯುಲ್ಲಿ ಇಷ್ಟು ಮಟ್ಟಕ್ಕೆ ಬೆಳೆದಿರುವುದನ್ನು ಸಹಿಸದೇ ಪ್ರಿಯಾಂಕ್ ಅವರು ಟೀಕೆ ಮಾಡುತ್ತಾ ಇದ್ದಾರೆ ಎಂದರು.
ಪ್ರಿಯಾಂಕ್ ಖರ್ಗೆ ಅವರು ಒಳ ಮೀಸಲಾತಿ ಬಗಗೆ ಒಂದು ಮಾತೂ ಆಡಲಿಲ್ಲ. ಒಳ ಮೀಸಲಾತಿ ನ್ಯೂನತೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದಿದ್ದೆ. ಅನ್ಯಾಯವಾಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಸದನದಲ್ಲಿ ಎಚ್ಚರಿಸಿದ್ದೆ. ಆದರೆ ಅವರು ಗಮನ ಹರಿಸಲಿಲ್ಲ. ಇದನ್ನು ಸರಿ ಮಾಡಿ ಎಂದು ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರಿಗೆ ಹೇಳಿದ್ದೆ. ಅವರೂ ಗಮನ ಹರಿಸಲಿಲ್ಲ. ಒಳಮೀಸಲಾತಿಯಲ್ಲಿ ಜನಾಂಗಗಳ ಲೋಪ ಅಲ್ಲ. ಅದು ಸರ್ಕಾರದ ಲೋಪ ಇದನ್ನು ಸರಕಾರವೇ ಸರಿ ಮಾಡಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ನ್ಯಾಯ ಯಾರ ಅಪ್ಪನ ಮನೆ ಆಸ್ತಿ ಅಲ್ಲ:
ಕಾಂಗ್ರೆಸ್ ಸಾಮಾಜಿಕ ನ್ಯಾಯದ ವಿರುದ್ಧ ಇದೆ. ಸಾಮಾಜಿಕ ನ್ಯಾಯ ಯಾರ ಅಪ್ಪನ ಮನೆ ಆಸ್ತಿ ಅಲ್ಲ. ನಾನು ವಿರೋಧ ಪಕ್ಷದ ನಾಯಕ ಆಗಲು ಸಾಮಾಜಿಕ ನ್ಯಾಯ ಕಾರಣ. ಸ್ವಾತಂತ್ರ್ಯ ಬಂದು 80 ವರ್ಷ ಆಗ್ತಾ ಬಂದರೂ ಅಂದಿನಿಂದ ನೀವು ದಲಿತರನ್ನು ವಂಚನೆ ಮಾಡ್ತಾ ಬಂದಿದ್ದೀರಿ. ಬಡವ ಬಡವನಾಗೇ ಇದ್ದರೆ ಕಾಂಗ್ರೆಸ್ ಓಟ್ ಬ್ಯಾಂಕ್ ಹಾಗೇ ಇರುತ್ತವೆ. ಅದಕ್ಕೆ ನೀವು ಹಾಗೆ ಮಾಡೋದು ಎಂದರು. ಪರಮೇಶ್ವರ್ ಅವರು ಸೋತಾಗ ಕಣ್ಣೀರು ಹಾಕಿದರು. ಸೋಲಿಸಿದದರೆಂದು ಆಗ ಅವರನ್ನು ಎಂಎಲ್ ಸಿ ಮಾಡಿ ಮಂತ್ರಿ ಮಾಡಿದ್ದೀರಿ. ಉಪ ಮುಖ್ಯಮಂತ್ರಿ ಮಾಡಲಿಲ್ಲ. ಈ ಬಾರಿ ಸಿದ್ದರಾಮಯ್ಯ ಅವರು ಸಿಎಂ ಆದಾಗ ಪರಮೇಶ್ವರ್ ಅವರನ್ನು ಡಿಸಿಎಂ ಮಾಡಬಹುದಿತ್ತು. ಸಾಮಾಜಿಕ ನ್ಯಾಯ ಕಾಂಗ್ರೆಸ್ನಲ್ಲಿ ಸತ್ತು ಹೋಗಿದೆ. ಆದರೆ ಬಿಜೆಪಿಯಲ್ಲಿ ಇನ್ನೂ ಇದೆ. ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಿದ್ದೇವು. ಬಾಬಾ ಸಾಹೇಬರಿಗೆ ಮತ್ತು ದಲಿತರಿಗೆ ಬಿಜೆಪಿ ಕೊಟ್ಟಷ್ಟು ಗೌರವ ಯಾರೂ ನೀಡಿಲ್ಲ ಎಂದರು.