ಆಂಧ್ರಪ್ರದೇಶ : ಪ್ರೀತಿಸಿದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ 22 ವರ್ಷದ ಯುವತಿಯನ್ನು ಆಕೆಯ ಹೆತ್ತ ತಂದೆಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ಆಂಧ್ರಪ್ರದೇಶದ ಮಾಚೆರ್ಲಾ ಪಟ್ಟಣದಲ್ಲಿ ನಡೆದಿದೆ. ಮೃತ ಯುವತಿಯನ್ನು ಚೌಡೇಶ್ವರಿ ಎಂದು ಗುರುತಿಸಲಾಗಿದೆ. ಮೃತ ಯುವತಿ ತನ್ನ ಪೋಷಕರ ವಿರೋಧದ ನಡುವೆಯೂ ಮಾರ್ಚ್ 4 ರಂದು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಿದ್ದಳು. ಇದರಿಂದ ಕೆರಳಿದ ಕುಟುಂಬಸ್ಥರು ಆಕೆಯ ವಿರುದ್ಧ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ಸ್ಥಳೀಯ ಸರ್ಕಲ್ ಇನ್ಸ್ಪೆಕ್ಟರ್ (ಸಿಐ), ಮಾರ್ಚ್ 15 ರಂದು ನವದಂಪತಿಯನ್ನು ಪತ್ತೆಹಚ್ಚಿ, ಯುವತಿಯ ಮೇಲೆ ಒತ್ತಡ ಹೇರಿ ಪೋಷಕರ ಮನೆಗೆ ಮರಳುವಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಪೊಲೀಸ್ ಅಧಿಕಾರಿಯ ಒತ್ತಾಯಕ್ಕೆ ಮಣಿದು ಹೆತ್ತವರ ಮನೆಗೆ ಮರಳಿದ್ದ ಚೌಡೇಶ್ವರಿ, ಕೇವಲ ಮೂರು ದಿನಗಳ ನಂತರ ಅಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಳು. ಆರಂಭದಲ್ಲಿ ಕುಟುಂಬಸ್ಥರು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದರು. ಈ ಸುಳ್ಳನ್ನು ನಂಬಿಸಲು ಸ್ಥಳೀಯ ಪೊಲೀಸ್ ಅಧಿಕಾರಿ ಕೂಡ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪೊಲೀಸರು ಮತ್ತು ಕುಟುಂಬಸ್ಥರು ಸೇರಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದರೂ, ಮರಣೋತ್ತರ ಪರೀಕ್ಷೆಯ ವರದಿಯು ಇದು ಕೊಲೆ ಎಂದು ಗೊತ್ತಾಗಿದೆ. ಚೌಡೇಶ್ವರಿ ಗಾಢ ನಿದ್ರೆಯಲ್ಲಿದ್ದಾಗ ಮುಖಕ್ಕೆ ದಿಂಬು ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯುವತಿಯ ತಂದೆ ಚಂದ್ರಶ್ರೀನು ಮತ್ತು ಮತ್ತೊಬ್ಬ ಸಂಬಂಧಿಯನ್ನು ಬಂಧಿಸಿದ್ದಾರೆ. ಕೊಲೆಗಾರರಿಂದ ಭಾರಿ ಪ್ರಮಾಣದ ಲಂಚ ಪಡೆದು, ಈ ಕೊಲೆಯನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಸರ್ಕಲ್ ಇನ್ಸ್ಪೆಕ್ಟರ್ನ್ನು ಅಮಾನತುಗೊಳಿಸಲಾಗಿದೆ. ಮಗಳ ಕೊಲೆಗೂ ಮುನ್ನ ಪೋಷಕರು ಬ್ಯಾಂಕ್ನಿಂದ ದೊಡ್ಡ ಮೊತ್ತದ ಹಣವನ್ನು ಡ್ರಾ ಮಾಡಿದ್ದು, ಈ ಹಣವನ್ನು ಪೊಲೀಸ್ ಅಧಿಕಾರಿಗೆ ಲಂಚವಾಗಿ ನೀಡಲಾಗಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.