ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಕಳೆದ 25 ದಿನಗಳಿಂದ ಸತತವಾಗಿ ದಾಳಿ ನಡೆಸುತ್ತಿತ್ತು. ಆದ್ರೆ ಅದೇನಾಯ್ತೋ ಗೊತ್ತಿಲ್ಲ, ನಿನ್ನೆ ಅಮೆರಿಕ ಏಕಾಏಕಿ 5 ದಿನಗಳವರೆಗೆ ಕದನ ವಿರಾಮ ಘೋಷಿಸಿದೆ. ಸಮರದ ವಿರುದ್ಧ ಭಾರತ ಸೇರಿ ಹಲವು ದೇಶಗಳು ಕಳವಳ ವ್ಯಕ್ತಪಡಿಸಿದ್ದವು. ಇದ್ರ ಬೆನ್ನಲ್ಲೇ ಶಾಂತಿ ಸ್ಥಾಪನೆಯ ಕುರಿತು ಮಾತುಕತೆಗೆ ಟ್ರಂಪ್ ಮತ್ತೊಂದು ಶಾಕಿಂಗ್ ಹೆಜ್ಜೆ ಇಟ್ಟಿದ್ದಾರೆ. ಅಮೆರಿಕ-ಇರಾನ್ ನಡುವಿನ ಸಂಘರ್ಷ ಬಗೆಹರಿಸಲು ಪಾಕಿಸ್ತಾನವು ಮಧ್ಯಸ್ಥಿಕೆವಹಿಸಲು ಸಿದ್ಧವಾಗಿದೆ. ಅಮೆರಿಕ ಇರಾನ್ ಸಂಭಾವ್ಯ ಮಾತುಕತೆಗಳ ಕುರಿತು ವಿಷಯಗಳನ್ನು ಚರ್ಚಿಸಲು ಮುಂದಾಗಿವೆ. ಯುದ್ದ ವಿಚಾರವಾಗಿ ಟ್ರಂಪ್ ಹಾಗೂ ಮುನೀರ್ ಮಾತುಕತೆ ನಡೆಸಲಿದ್ದಾರೆ. ಇದಾದ ಬಳಿಕ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಶಾಂತಿ ಕಾರ್ಯಾಚರಣೆಗಳ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಉದ್ಯಮಿ ಜೇರೆಡ್ ಕುಶ್ನರ್ ಪಾಕಿಸ್ತಾನದಲ್ಲಿ ಇರಾನಿನ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಬೆಳವಣಿಗೆ ಸತ್ಯವಾಗಿರುವುದೇ ಆದರೆ, ಅದು ಭಾರತಕ್ಕೆ “ತೀವ್ರ ಹಿನ್ನಡೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಹೇಳಿಕೆ ನೀಡಿದ್ದಾರೆ. ಈ ಹಿಂದೆ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಂಕಷ್ಟದಲ್ಲಿದ್ದ ಪಾಕಿಸ್ತಾನ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಪ್ರಾಮುಖ್ಯತೆ ಗಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.