ಶಿವಮೊಗ್ಗ: ಪಶುವೈದ್ಯ ಸಮೀಕ್ಷಾ ರೆಡ್ಡಿ ನೀರಾನೆ ದಾಳಿಗೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಹುಲಿಧಾಮದಲ್ಲಿ ನಡೆದಿದ್ದು, ವೈದ್ಯೆ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೀರಾನೆ ದಾಳಿಗೆ ಪಶುವೈದ್ಯ ಸಮೀಕ್ಷಾ ರೆಡ್ಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಹಾಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತ ಸಮೀಕ್ಷಾ ರೆಡ್ಡಿ ಮಾವ ನವೀನ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ನಲ್ಲಿ ಮಾತನಾಡಿದ ನವೀನ್, ಚಿಕ್ಕಂದಿನಿಂದಲೂ ಕಾಡು ಪ್ರಾಣಿಗಳೆಂದರೆ ಸಮೀಕ್ಷಾಗೆ ಹೆಚ್ಚು ಪ್ರೀತಿ. ನೂರಾರು ಕೋಟಿ ರೂ ಆಸ್ತಿ ಇದ್ದರೂ ಸೇವೆ ಮಾಡಬೇಕೆಂಬ ಹಂಬಲ ಇತ್ತು. ಮದುವೆ ಮಾಡಿಕೊಳ್ಳುವ ಯೋಚನೆ ಕೂಡ ಸಮೀಕ್ಷಾಗೆ ಇರಲಿಲ್ಲ. ಅಧಿಕಾರಿಗಳೇ ಹಾಸ್ಟೆಲ್ ಬಳಿ ಜೀಪ್ ಕಳುಹಿಸಿದ್ದಾರೆ. ಹಾಸ್ಟೆಲ್ ವಾರ್ಡನ್ ಇಬ್ಬರು ಯುವತಿಯರನ್ನ ಜೊತೆಗೆ ಕಳಿಸಿದ್ದಾರೆ.
ಒಬ್ಬ ಹುಡುಗಿಯನ್ನು ನೀರಾನೆ ಬಳಿ ಕಳಿಸಲು ಕಾಮನ್ಸೆನ್ಸ್ ಬೇಕು. 20 ಸಿಂಹಗಳು ಸಹ ಒಂದು ನೀರಾನೆ ಸಮೀಪ ಹೋಗಲ್ಲ, ಅದರಲ್ಲೂ ನೀರಾನೆ ಗರ್ಭಿಣಿ ಇದ್ದು ಭಯ ಇರುತ್ತೆ. ವೈಲ್ಡ್ ಲೈಫ್ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ.