ಬೆಂಗಳೂರು: ಶಂಕಿತ ಉಗ್ರ ಮೊಹಮ್ಮದ್ ಅರ್ಷದ್ ಖಾನ್ (Arshad Khan) ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದಿದ್ದಾರೆ. ದೇಶಾದ್ಯಂತ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಈತ ನ್ಯಾಯಾಲಯದಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ. ಆದರೆ, ಅರ್ಷದ್ ಖಾನ್, ಜಾಮೀನು ನಿಯಮಗಳನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐ ಎ (NIA) ವಿಶೇಷ ನ್ಯಾಯಾಲಯವು ಆರೋಪಿಯ ಜಾಮೀನು ರದ್ದುಪಡಿಸಿ, ಆತನನ್ನು ಕೂಡಲೇ ಬಂಧಿಸಿ ಹಾಜರುಪಡಿಸುವಂತೆ ಆದೇಶ ನೀಡಿತ್ತು.
ಹೀಗಾಗಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಬೆಂಗಳೂರಿನಲ್ಲಿ ಅರ್ಷದ್ ಖಾನ್ ಅಡಗುತಾಣದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಗ್ರೆನೇಡ್ ಸಿಕ್ಕಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಅರ್ಷದ್ ಖಾನ್ ನನ್ನು ಬಂಧಿಸಿದ್ದರು. ನಂತರ ಈ ಕೇಸ್ ಎನ್ಐಗೆ ವರ್ಗಾವಣೆಯಾಗಿತ್ತು.4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತ, 2017ರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇತ್ತೀಚಿನ ತನಿಖೆಗಳ ಪ್ರಕಾರ, ಇವನು ಜುನೈದ್ ಜತೆಗೂಡಿ ಗ್ರೆನೇಡ್ ಪೂರೈಕೆ ಮತ್ತು ಉಗ್ರ ಕೃತ್ಯಗಳ ಸಂಚಿನಲ್ಲಿ ಭಾಗಿಯಾಗಿದ್ದ.
ಈತನ ಮೇಲೆ ಕೊಲೆ, ಕೊಲೆಯತ್ನ ರಾಬರಿ ಸೇರಿದಂತೆ ಒಟ್ಟು 17 ಕೇಸ್ಗಳಿವೆ. ಯಾವತ್ತೂ ಪೊಲೀಸರು ಬಂಧನಕ್ಕೆ ಬಂದ್ರೆ ಕತ್ತು ಕೊಯ್ದುಕೊಳ್ಳೋದಾಗಿ ಹೆದರಿಸಿ ಎಸ್ಕೆಪ್ ಆಗ್ತಾ ಇದ್ದ. ಪೊಲೀಸರು ಹೆದರಿ ವಾಪಸ್ಸು ಹೋಗಲಿ ಎಂದು ಆತ್ಮಹತ್ಯೆ ಹೈಡ್ರಾಮಾ ಮಾಡ್ತಾ ಇದ್ದ. ಆದರೆ ಈ ಬಾರಿ ಆತನ ಯಾವುದೇ ಪ್ಲಾನ್ ಯಶಸ್ವಿಯಾಗಿಲ್ಲ.ಸದ್ಯ ಅರ್ಷದ್ ಖಾನ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಂಕಿತ ಜುನೈದ್ ಸಂಪರ್ಕದಲ್ಲೇನಾದ್ರು ಇದ್ದಾನಾ? ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನಾ ಎಂದು ತನಿಖೆ ನಡೆಸುತ್ತಿದ್ದಾರೆ.