ಕಾಲಿವುಡ್ ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾಗೆ ಭಾರೀ ಪೈರಸಿ ಕಾಟ ಎದುರಾಗಿದೆ. ಬಿಡುಗಡೆಯಾಗುವ ಮೊದಲುಲೇ ಚಿತ್ರದ ದೃಶ್ಯಗಳು ಲೀಕ್ ಆಗಿರುವುದು ಚಿತ್ರರಂಗದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಹೌದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಜನ ನಾಯಗನ್ ಸಿನಿಮಾ, ಭಾರಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದು, ಬಿಡುಗಡೆಯ ಮುನ್ನವೇ ಲೀಕ್ ಆಗಿದೆ. ಈ ಕುರಿತು ಸೈಬರ್ ಕ್ರೈಂ ವಿಭಾಗದ ಪೊಲೀಸರು ತ್ವರಿತ ಕ್ರಮ ಕೈಗೊಂಡು 6 ಮಂದಿಯನ್ನು ಬಂಧಿಸಿದ್ದಾರೆ.
ನಿರ್ಮಾಣ ಸಂಸ್ಥೆಯ ಪರವಾಗಿ ಕಾನೂನು ಸಲಹೆಗಾರ ವಿಜಯನ್ ಸುಬ್ರಹ್ಮಣ್ಯಂ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ನೀಡಿದ್ದು, ಲೀಕ್ ಆದ ದೃಶ್ಯಗಳನ್ನು ಡೌನ್ಲೋಡ್ ಅಥವಾ ಶೇರ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ವಾಟ್ಸಾಪ್, ಟೆಲಿಗ್ರಾಮ್, ಎಕ್ಸ್, ಫೇಸ್ಬುಕ್ ಸೇರಿದಂತೆ ಯಾವುದೇ ಡಿಜಿಟಲ್ ವೇದಿಕೆಯಲ್ಲಿ ಈ ದೃಶ್ಯಗಳನ್ನು ಹಂಚಿದರೆ ಪ್ರಕರಣ ದಾಖಲಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಇದು ದೊಡ್ಡ ಹೊಡೆತವೆಂದು ಚಿತ್ರತಂಡ ಹೇಳಿದೆ.ಎಚ್. ವಿನೋದ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು, ಥಿಯೇಟರ್, ಸ್ಯಾಟಲೈಟ್ ಹಾಗೂ ಒಟಿಟಿ ಹಕ್ಕುಗಳ ಮೂಲಕ ಭಾರಿ ಮೌಲ್ಯ ಹೊಂದಿದೆ.
ಈ ಪೈರಸಿ ಕೃತ್ಯವನ್ನು ಖಂಡಿಸಿ ದಕ್ಷಿಣ ಭಾರತದ ಚಿತ್ರರಂಗ ವಿಜಯ್ ಬೆಂಬಲಕ್ಕೆ ನಿಂತಿದೆ. ಮೆಗಾಸ್ಟಾರ್ ಚಿರಂಜೀವಿ, ಸೂರ್ಯ, ಶಿವಕಾರ್ತಿಕೇಯನ್, ಖುಷ್ಬೂ ಸುಂದರ್, ಕಾರ್ತಿ, ಜಿ.ವಿ. ಪ್ರಕಾಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನೊಂದೆಡೆ, ವಿಜಯ್ ಅವರು ರಾಜಕೀಯ ಪ್ರವೇಶದ ಸನ್ನಾಹದಲ್ಲಿರುವ ಸಮಯದಲ್ಲೇ ಈ ಘಟನೆ ನಡೆದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.ಪೈರಸಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ನಿರ್ಮಾಣ ಸಂಸ್ಥೆ ಎಚ್ಚರಿಸಿದ್ದು, ಪ್ರೇಕ್ಷಕರು ಕಾನೂನುಬಾಹಿರವಾಗಿ ಚಿತ್ರ ವೀಕ್ಷಣೆ ಮಾಡದೇ ಚಿತ್ರರಂಗವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದೆ.