ಹುಬ್ಬಳ್ಳಿ: ಧಾರವಾಡ ಕೆಐಎಡಿಬಿ ವಲಯ ಕಚೇರಿ ಸ್ಥಳಾಂತರಿಸದಂತೆ ರಾಜ್ಯ ಸರ್ಕಾರದ ಗಮನ ಸೆಳೆದಿದ್ದೆ. ಸರ್ಕಾರ ತಮ್ಮ ಮನವಿಗೆ ಸ್ಪಂದಿಸಿರುವುದು ಖುಷಿಯ ವಿಚಾರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ತಮ್ಮ ಒತ್ತಾಯಕ್ಕೆ ಸ್ಪಂದಿಸಿ ಧಾರವಾಡದ ಕೆಐಎಡಿಬಿ ವಲಯ ಕಚೇರಿ ಸ್ಥಳಾಂತರ ಸ್ಥಗಿತಗೊಳಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ ಜೋಶಿ.
ಸರ್ಕಾರದ ಈ ನಿರ್ಧಾರದಿಂದ ಅಂತೂ ಉತ್ತರ ಕರ್ನಾಟಕ ಭಾಗಕ್ಕೆ ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಲೆ ಕೈಗಾರಿಕಾ ಅಭಿವೃದ್ಧಿ, ಬೆಳವಣಿಗೆಗೆ ಮತ್ತಷ್ಟು ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಏನಿದರ ಹಿನ್ನೆಲೆ: ರಾಜ್ಯ ಸರ್ಕಾರ ಧಾರವಾಡದಲ್ಲಿ ಸುಮಾರು 40 ವರ್ಷಗಳಿಂದ ಇದ್ದಂತಹ ಕೆಐಎಡಿಬಿ ವಲಯ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಆದರೆ, ಇದು ಇಡೀ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಏಕೈಕ ವಲಯ ಕಚೇರಿ. ಹಾಗಾಗಿ ಇದರ ಸ್ಥಳಾಂತರ ನಿರ್ಧಾರ ಕೈ ಬಿಡುವಂತೆ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು. ಇಲ್ಲಿನ ಕೆ ಐಎಡಿಬಿ ವಲಯ ಕಚೇರಿ ಸ್ಥಳಾಂತರ ಬದಲು ಉತ್ತರಕ ರ್ನಾಟಕ ಭಾಗದ ಪ್ರಮುಖ ನಗರಗಳಲ್ಲಿ ಹೊಸದಾಗಿ ಹೆಚ್ಚಿನ ಆಡಳಿತಾತ್ಮಕ ಕಚೇರಿಗಳನ್ನು ಪ್ರಾರಂಭಿಸುವಂತೆ ಜೋಶಿ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.